ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿ ಕೊಲೆ ಮಾಡಿರುವ ಆರೋಪದ ಮೇಲೆ ವಿಚಾರಣೆಗಾಗಿ ಕರೆತಂದಿದ್ದ ನಿವೃತ್ತ ಯೋಧ ಕೃಷ್ಣಮೂರ್ತಿ ಎನ್ನುವವರು ರಾಮಮೂರ್ತಿ ನಗರ ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿದ್ದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಬಾಣಸವಾಡಿಯ ಅಬ್ಬಯ್ಯ ರೆಡ್ಡಿ ಲೇಔಟ್ನ ಕೃಷ್ಣಮೂರ್ತಿ (53) ಅವರು ಕಳೆದ ನ. 20 ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮೇಘಲಾದೇವಿ (50) ಅವರನ್ನು ಕೊಲೆ ಮಾಡಿರುವುದು ಪ್ರಕರಣ ದಾಖಲಿಸಿದ್ದ ರಾಮಮೂರ್ತಿ ನಗರದ ಪೆÇಲೀಸರು ನಡೆಸಿದ ತನಿಖೆಯಲ್ಲಿ ಖಚಿತವಾಗಿತ್ತು
ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲನೆಯಲ್ಲಿ ಕೃಷ್ಣಮೂರ್ತಿ ಭಾಗಿಯಾಗಿರುವುದು ಧೃಡಪಟ್ಟಿದ್ದರಿಂದ ಕೃಷ್ಣಮೂರ್ತಿ ಅವರನ್ನು ಭಾನುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಕೃತ್ಯವೆಸಗಿದ ಮಾರಕಾಸ್ತ್ರವನ್ನು ಕಲ್ಕೆರೆ ಬಳಿಯ ನಿರ್ಜನ ಪ್ರದೇಶದ ಬಳಿ ಎಸೆದಿರುವುದಾಗಿ ತಿಳಿಸಿದ್ದಾರೆ.
ಕೂಡಲೇ ಅವರನ್ನು ಅಲ್ಲಿಗೆ ಕರೆದೊಯ್ದು ಮಾರಕಾಸ್ತ್ರ ವಶಪಡಿಸಿಕೊಳ್ಳಲು ಮುಂದಾದಾಗ ಏಕಾಏಕಿ ಕುಸಿದುಬಿದ್ದ ಕೃಷ್ಣಮೂರ್ತಿ ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ತಿಳಿಸಿದ್ದಾರೆ.
ಸೇನೆಯಿಂದ ನಿವೃತ್ತರಾದ ನಂತರ ಕೃಷ್ಣಮೂರ್ತಿ ನಗರದ ಮಿಟ್ರಿ ಇಂಜಿನಿಯರಿಂಗ್ ಸರ್ವೀಸಸ್ನಲ್ಲಿ ಲಿಫ್ಟ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ವರ್ಷಗಳ ಹಿಂದೆ ಮೇಘಲಾದೇವಿ ಅವರನ್ನು ವಿವಾಹವಾಗಿ ಅಬ್ಬಯ್ಯ ರೆಡ್ಡಿ ಲೇಔಟ್ನಲ್ಲಿ ವಾಸವಾಗಿದ್ದರು.
ದಂಪತಿಗೆ ಮಕ್ಕಳಿರಲಿಲ್ಲ. ಪೊಲೀಸ್ ವಶದಲ್ಲಿದ್ದಾಗಲೇ ಕೃಷ್ಣಮೂರ್ತಿ ಮೃತಪಟ್ಟಿರುವುದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ