ದಾವಣಗೆರೆ:
ಒಂದು ಧರ್ಮದ ಧ್ವಜವಿದ್ದ ಕಂಬವೊಂದರಲ್ಲಿಯೇ ಅದಕ್ಕಿಂತಲೂ ಎತ್ತರದಲ್ಲಿ ಇನ್ನೊಂದು ಧರ್ಮದ ಧ್ವಜ ಕಟ್ಟಿದ ಕಾರಣಕ್ಕೆ ಎರಡೂ ಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ಇಲ್ಲಿನ ಕೊಂಡಜ್ಜಿ ರಸ್ತೆಯ ಆರ್ಟಿಓ ಕಚೇರಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಕೊಂಡಜ್ಜಿ ರಸ್ತೆಯ ಆರ್ಟಿಓ ಕಚೇರಿ ಸಮೀಪದ ರಿಂಗ್ ರಸ್ತೆಯ ಮಹಾತ್ಮ ಗಾಂಧಿ ಬ್ಯುಲ್ಡಿಂಗ್ ಬಳಿಯ ಕಂಬವೊಂದರಲ್ಲಿ ಮುಂಚೆಯೇ ಒಂದು ಧರ್ಮದ ಧ್ವಜ ಕಟ್ಟಲಾಗಿತ್ತು. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಇನ್ನೊಂದು ಧರ್ಮದ ಯುವಕರು ಮೊದಲಿದ್ದ ಧ್ವಜಕ್ಕಿಂತಲೂ ಎತ್ತರವಾಗಿ ಧ್ವಜ ಕಟ್ಟಿದ್ದಾರೆ. ಇದನ್ನು ಕಂಡ ಯುವಕರು ಈ ವಿಷಯ ಕಾಳ್ಗಿಚ್ಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಾಯಿಂದ ಬಾಯಿಗೆ ವಿಷಯ ಹರಡಿದ್ದರ ಪರಿಣಾಮ ನೋಡ ನೋಡುತ್ತಿದ್ದಂತೆಯೇ ಎರಡೂ ಕೋಮಿನ ಯುವಕರು ಸ್ಥಳದಲ್ಲಿ ಜಮಾಯಿಸಿ, ಮಾತಿಗೆ ಮಾತು ಬೆಳೆಸಿ ಮಾತಿನ ಚಕಮಕಿ ನಡೆಸಿದ್ದ ಕಾರಣ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ಮುಟ್ಟಿದ ತಕ್ಷಣವೇ ಗಾಂಧಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಎರಡೂ ಕೋಮಿನ ಯುವಕರಿಗೆ ತಿಳಿ ಹೇಳಲು ಮುಂದಾದ ಸಂದರ್ಭದಲ್ಲಿ ಒಂದು ಕೋಮಿನ ಯುವಕರು ನಮ್ಮ ಧರ್ಮದ ಧ್ವಜವಿದ್ದ ಕಂಬದಲ್ಲಿಯೇ ಅದಕ್ಕಿಂತ ಎತ್ತರದಲ್ಲಿ ಧ್ವಜ ಕಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೆಲೀಸರು ಎರಡೂ ಕೋಮಿನ ಯುವಕರನ್ನು ಕಡೆಯವರಿಗೆ ಸಮಾಧಾನಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಎಲ್ಲರೂ ಸೇರಿ ಹಬ್ಬ ಆಚರಿಸುವಂತಾಗಬೇಕು. ಸಾಮರಸ್ಯಕ್ಕೆ ಯಾವುದೇ ಭಂಗವಾಗದಂತೆ ಸಹೋದರತ್ವದಿಂದ ಇರಬೇಕು ಎಂಬುದಾಗಿ ಸ್ಥಳದಲ್ಲಿದ್ದ ಹಿರಿಯರು ಸಹ ಬುದ್ಧಿವಾದ ಹೇಳಿದ ಕಾರಣಕ್ಕೆ ಪರಿಸ್ಥಿತಿ ತಿಳಿಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ