ಹೊಳಲ್ಕೆರೆ:
ಕಣ್ಣು ದೇಹದ ಮುಖ್ಯ ಅಂಗವಾಗಿದ್ದು ಅವುಗಳ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಉಚಿತ ನೇತ್ರ ಚಿಕಿತ್ಸೆಗಾಗಿ, ಅಗತ್ಯತೆ ಇದ್ದವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ದೃಷ್ಟಿ ಕಣ್ಣಿನ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೀಪದಿಂದ ದೀಪ ಬೆಳಗಿಸಿದಂತೆ ದೃಷ್ಟಿ ದಾನ ಮಾಡುವ ಮೂಲಕ ಮನುಜ ಕುಲ ಬೆಳಗಿಸಬೇಕು. ದೃಷ್ಟಿ ಚಿಕಿತ್ಸಾ ಶಿಬಿರ ಸಮಾಜ ಮುಖಿ ಕಾರ್ಯ ಮೇಲ್ಪಂಕ್ತಿಯಾಗಿದೆ. ಇಂಥ ಕೆಲಸಕ್ಕೆ ಸರ್ವರ ಸಹಕಾರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ದೃಷ್ಟಿ ಕಣ್ಣಿ ಆಸ್ಪತ್ರೆ ಆಡಳಿತಾಧಿಕಾರಿ ಸಂದೀಪ್ ಐತಾಳ್ ಮಾತನಾಡಿ ದೃಷ್ಟಿ ಕಣ್ಣಿನ ಆಸ್ಪತ್ರೆ 2015ರಲ್ಲಿ ಸ್ಥಾಪನೆಯಾಗಿದೆ. ರಾಜ್ಯದಲ್ಲಿ 10 ಕಡೆ ಈ ಆಸ್ಪತ್ರೆ ಇದೆ. ಪ್ರತಿಯೊಬ್ಬ ಮನುಷ್ಯನು 40 ವರ್ಷ ದಾಟಿದ ನಂತರ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆಯಲ್ಲಿ 3 ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿನಲ್ಲಿ ತೊಂದರೆಗಳಾಗುವುದು. 10 ವರ್ಷದ ಮಗುವಿಗೂ ಕಣ್ಣಿನಲ್ಲಿ ಪೊರೆ ಬಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾನೆ. ಆಸ್ಪತ್ರೆಗಳಿಗೆ ಹೋದರೆ 200 ರೂ. ಚಿಕಿತ್ಸೆಗೆ ಇರುತ್ತದೆ. ಇದು ಉಚಿತವಾಗಿ ತಪಾಸಣೆ ಮಾಡುತ್ತಿದ್ದೇವೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ವಕೀಲರಾದ ಕೆ.ಸತ್ಯನಾರಾಯಣ ಮಾನವ ಅಂಗಾಂಗಗಳ ದಾನ ಮತ್ತು ಕಾನೂನು ಕುರಿತು ಉಪನ್ಯಾಸ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ಮಾತನಾಡಿ ಯಾವುದೇ ವ್ಯಕ್ತಿ ಸ್ವಯಂಪ್ರೇರಿತನಾಗಿ ಅಂಗಗಳು ದಾನ ಮಾಡಲು ಬರುವುದಿಲ್ಲ. ವೈದ್ಯರ ಬಳಿ ವೈದ್ಯಕೀಯ ತಪಾಸಣೆ ಮಾಡಿಸಿ ನೋಂದಣಿಯಾದರೆ ಮಾತ್ರ ಅಂಗಗಳು ದಾನ ಮಾಡಲು ಸಾಧ್ಯ. ವ್ಯಕ್ತಿ ಅಂಗಗಳ ದುರುಪಯೋಗ ಪಡಿಸಿದರೆ ಅಂತಹವನಿಗೆ 3, 5 ವರ್ಷ ಶಿಕ್ಷಗೆ ಅರ್ಹನಾಗುತ್ತಾನೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ರವಿಕುಮಾರ್ ವಿ., ಎಪಿಪಿ ಪ್ರಶಾಂತ್ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಜಿ.ಪಿ.ಪ್ರದೀಪ್ ಕುಮಾರ್, ವಕೀಲರಾದ ಹನುಮಂತರಾಯಪ್ಪ ಉಪಸ್ಥಿತರಿದ್ದರು. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ 500ಕ್ಕಿಂತಲೂ ಹೆಚ್ಚು ಜನ ನೇತ್ರ ತಪಾಸಣೆ ಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ