ಬೆಂಗಳೂರು
ಟ್ರಿನಿಟಿ ಬಳಿಯ ಮೆಟ್ರೋ ನಿಲ್ದಾಣದ ಪಿಲ್ಲರ್ ಬಿರುಕು ಬಿಟ್ಟಿರುವುದನ್ನು ದುರಸ್ತಿಪಡಿಸುತ್ತಿದ್ದು, ಸುರಕ್ಷತೆ ದೃಷ್ಟಯಿಂದ ಇಡೀ ಮೆಟ್ರೋ ಮಾರ್ಗವನ್ನು ಸಮಗ್ರವಾಗಿ ಪರಿಶೀಲನೆ ಮಾಡುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದುರಸ್ತಿ ಕಾರ್ಯವನ್ನು ಪರಿಶೀಲಿಸಲು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರುವರೆಗೆ ಮೆಟ್ರೋ ರೈಲಿನಲ್ಲಿ ಸಂಚರಿಸಿ, ಟ್ರಿನಿಟಿ ಸರ್ಕಲ್ನಲ್ಲಿ ಬಿರುಕು ಬಿಟ್ಟಿರುವ ಪಿಲ್ಲರ್ ಅನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಲ್ಲರ್ ಬಿರುಕು ಬಿಟ್ಟಿರುವುದನ್ನು ಈಗಾಗಲೇ ದೆಹಲಿಯಿಂದ ತಜ್ಞರು ಹಾಗೂ ನಮ್ಮ ತಾಂತ್ರಿಕ ತಂಡ ಪರಿಶೀಲಿಸಿ, ರಿಪೇರಿ ಕೆಲಸ ಪ್ರಾರಂಭಿಸಿದೆ.
ಪಿಲ್ಲರ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಿಲ್ಲರ್ ಮೇಲೆ ಕೂರಿಸುವಾಗ ಸ್ಪೇರಿಂಗ್ ಹಾಕಿ ಕೂರಿಸಲಾಗುತ್ತದೆ. ಆ ಸ್ಪೇರಿಂಗ್ ಸ್ವಲ್ಪ ಪ್ರಮಾಣದಲ್ಲಿ ಜರುಗಿದೆ. ಆದರೆ ಯಾವುದೇ ಆಪಾಯವಿಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ. ಜನರಿಗೆ ಧೈರ್ಯ ತುಂಬುವ ಉದ್ದೇಶದಿಂದಲೇ ತಾವು ಸಹ ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾಗಿ ತಿಳಿಸಿದರು.
ಈ ಬಿರುಕಿನಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದ್ದು, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳುವ ಉದ್ದೇಶದಿಂದ ಇಡೀ ಮೆಟ್ರೋ ಮಾರ್ಗವನ್ನು ಸಮಗ್ರವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ