ಮಧುಗಿರಿ :
ಹಳೆಯ ವೈಶಮ್ಯದ ಹಿನ್ನಲೆಯಲ್ಲಿ ಸ್ಥಳೀಯ ಪತ್ರಿಕೆಯ ಸಂಪಾದಕನ ಮೇಲೆ ಜೆಡಿಎಸ್ ಮುಖಂಡರಿಂದ ಹಾಡು ಹಗಲೇ ಮಿಡಿಗೇಶಿ ಬಸ್ ನಿಲ್ದಾಣದ ಸಮೀಪವಿರುವ ಟಿ ಅಂಗಡಿ ಮುಂಭಾಗದಲ್ಲಿ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಹೊಸ ಇಟಕಲೋಟಿ ಗ್ರಾಮದ ಸ್ಥಳೀಯ ವಾರ ಪತ್ರಿಕೆಯ ಸಂಪಾದಕ ಜಿ.ಎಚ್.ಸೂರ್ಯನಾರಾಯಣ್ ಮೇಲೆ ಯಲ್ಕೂರು ಗ್ರಾಮದ ಜೆ.ಡಿ.ಎಸ್ ಮುಖಂಡ ರಾಜ್ಮೋಹನ್ ಆತನ ಮಗನಾದ ಆರ್.ನರೇಂದ್ರ ಹಾಗೂ ಲಕ್ಷ್ಮೀನಾರಾಯಣ್ ಎಂಬುವವರು ಗುಂಪು ಕಟ್ಟಿಕೊಂಡು ಏಕಾಏಕಿ ಕಬ್ಬಿಣದ ರಾಡ್ ನಿಂದ ದಾಳಿ ನಡೆಸಿ ತಲೆಗೆ ತೀವ್ರವಾಗಿ ಗಾಯಗೊಳಿಸಿದ್ದಾರೆ. ಗಾಯಾಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಪ್ರಕರಣವನ್ನು ಮಿಡಿಗೇಶಿ ಪೋಲೀಸರು ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವಾರಪತ್ರಿಕೆ ಸಂಪಾದಕರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ, ದುಶ್ಕರ್ಮಿಗಳು ಮೊದಲಿನಿಂದಲೂ ಇದೇ ಚಾಳಿ ಮುಂದುವರಿಸುತ್ತಾ ಬಂದಿದ್ದು, ಇವರ ವಿರುದ್ದ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗುವುದು, ಪೋಲೀಸ್ ಠಾಣಾ ಸಮೀಪದಲ್ಲೇ ಈ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಾನೂನು ಸುವ್ಯವಸ್ಥೆ ಬಲಗೊಳ್ಳಬೇಕಿದ್ದು, ಇವರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆ ನೋಡಿದಾಗ ರಾಜಕೀಯ ದ್ವೇಷ ಕಾಣಿಸುತ್ತಿದ್ದು, ಕಾನೂನು ಪಾಲಕರು ಇದಕ್ಕೆ ಸಂಬಂಧಪಟ್ಟ ಆರೋಪಿಗಳಿಗೆ ತಕ್ಕ ಪಾಠ ಕಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು – ಉಮೇಶ್, ಕಾರ್ಯಾಧ್ಯಕ್ಷರು, ತಾಲೂಕು ವಾರಪತ್ರಿಕೆ ಸಂಪಾದಕರ ಸಂಘ.