ಚಿತ್ರದುರ್ಗ:
ಬೇರೆ ರಾಜ್ಯಗಳ ಬಂಡವಾಳಶಾಹಿಗಳು ಹೊಳಲ್ಕೆರೆ ಪಟ್ಟಣದಲ್ಲಿ ಹೈಟೆಕ್ ಅಂಗಡಿಗಳನ್ನು ತೆರೆಯುವ ಮೂಲಕ ನಮ್ಮ ಕ್ಷೌರಿಕ ವೃತ್ತಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆಂದು ಹೊಳಲ್ಕೆರೆ ತಾಲೂಕು ಸವಿತಾ ಸಮಾಜದವರು ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸವಿತಾ ಸಮಾಜಕ್ಕೆ ಸೇರಿದ 25 ಕ್ಕೂ ಹೆಚ್ಚು ಕುಟುಂಬಗಳು ಹೊಳಲ್ಕೆರ ಪಟ್ಟಣದಲ್ಲಿ ವಾಸಿಸುತ್ತಿದ್ದು, ಹಿಂದಿನಿಂದಲೂ ಪೂರ್ವಿಕರು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದ್ದ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಕುಟುಂಬ ಸಾಗಿಸುತ್ತಿದ್ದೇವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ನಮಗೆ ಕ್ಷೌರಿಕ ವೃತ್ತಿಯನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಗೊತ್ತಿಲ್ಲ. ಇದೆ ವೃತ್ತಿಯಿಂದ ಕುಟುಂಬ ಸಾಗಿಸುತ್ತಿದ್ದು,
ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಇಲ್ಲಿಗೆ ಬರುವ ಬಂಡವಾಳಶಾಹಿಗಳು ನವೀನ ರೀತಿಯ ಅಂಗಡಿಗಳನ್ನು ತೆರೆಯುವ ಮೂಲಕ ನಮ್ಮ ಕ್ಷೌರಿಕ ವೃತ್ತಿಯನ್ನು ಹೈಜಾಕ್ ಮಾಡುತ್ತಿದ್ದಾರೆ. ಹಾಗಾಗಿ ಅನ್ಯ ರಾಜ್ಯಗಳವರ ಕ್ಷೌರಿಕ ಅಂಗಡಿಗಳನ್ನು ಹೊಳಲ್ಕೆರೆ ಪಟ್ಟಣದಿಂದ ತೆರೆವುಗೊಳಿಸಿ ನಮ್ಮ ಜೀವನ ಹಾಗೂ ವೃತ್ತಿಗೆ ಭದ್ರತೆ ನೀಡಬೇಕೆಂದು ಸವಿತಾ ಸಮಾಜದವರು ಒತ್ತಾಯಿಸಿದರು.
ಹೊಳಲ್ಕೆರೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಟಿ.ವೆಂಕಟೇಶ್, ಶ್ರೀನಿವಾಸ್, ರಂಜಿತ್ಕುಮಾರ್, ನಾಗರಾಜ್, ಕುಮಾರ್, ಶ್ರೀನಿವಾಸ್, ಶಿವಕುಮಾರ್, ಶ್ಯಾಂ, ಗಿರೀಶ್ ಸೇರಿದಂತೆ ಹೊಳಲ್ಕೆರೆ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ