ತುರುವೇಕೆರೆ
ಸ್ಥಳೀಯ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿದ್ದ ಹುಂಡಿಯನ್ನು ತಹಸೀಲ್ದಾರ್ ನಯೀಮ್ ಉನ್ನಿಸ್ಸಾರವರ ನೇತೃತ್ವದಲ್ಲಿ ಬುಧವಾರ ಸಾರ್ವಜನಿಕರ ಸಮ್ಮುಖ ತೆರೆಯಲಾಯಿತು.
ಎಣಿಕೆ ಮಾಡಿದ ಸಂದರ್ಭದಲ್ಲಿ ಹುಂಡಿಯಲ್ಲಿ 2,82,320 ರೂ.ಗಳು ಇದ್ದವು. ಕಳೆದ ಆರೇಳು ತಿಂಗಳ ಹಿಂದೆಯಷ್ಟೆ ಹುಂಡಿಯನ್ನು ತೆರೆಯಲಾಗಿತ್ತು. ವರ್ಷಕ್ಕೊಮ್ಮೆ ನಡೆಯುವ ರಥೋತ್ಸವದ ನಂತರ ಹುಂಡಿಯನ್ನು ತೆರೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಕಳ್ಳರ ಕಾಟದಿಂದ ಹುಂಡಿಯ ಹಣವನ್ನು ತೆರೆಯಲಾಯಿತು. ಮುಂಬರುವ ತಿಂಗಳು ಬೇಟೆರಾಯಸ್ವಾಮಿಯವರ ಬ್ರಹ್ಮರಥೋತ್ಸವ ಜರುಗಲಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಳ್ಳರು ಹುಂಡಿಯನ್ನು ದೋಚುತ್ತಿರುವ ಸನ್ನಿವೇಶದಿಂದ ಆತಂಕಗೊಂಡಿದ್ದ ಶಾಸಕ ಮಸಾಲಾ ಜಯರಾಮ್ರವರು ಪ್ರಮುಖ ದೇವಾಲಯಗಳ ಹುಂಡಿಗಳನ್ನು ತೆರೆದು ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಮುಖ ದೇವಾಲಯಗಳ ಹುಂಡಿಯನ್ನು ತೆರೆಯಲಾಗುತ್ತಿದೆ.
ಬೇಟೆರಾಯಸ್ವಾಮಿ ದೇವಾಲಯದ ಹುಂಡಿ ತೆರವಿನ ವೇಳೆ ಕಂದಾಯ ನಿರೀಕ್ಷಕರಾದ ಶಿವಕುಮಾರಸ್ವಾಮಿ, ಮುಜರಾಯಿ ಗುಮಾಸ್ತ ಸುರೇಶ್, ಗ್ರಾಮ ಲೆಕ್ಕಿಗರಾದ ನವೀನ್ ಕುಮಾರ್, ರೋಹಿತ್, ಶ್ವೇತಾ, ರಮೇಶ್, ಬ್ಯಾಂಕ್ ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ