ಬೆಂಗಳೂರು
ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಎಸ್ಐಟಿಗೆ ನೀಡಿದ್ರೆ ವಿಚ್ ಹಂಟಿಂಗ್ ಆಗುತ್ತದೆ. ಇದು ಎಲ್ಲಿಗೆ ಹೋಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಸದನದಲ್ಲಿ ಆಡಿಯೋ ಸಿಡಿ ಪ್ರಕರಣ ಸಂಬಂಧ ಮಾತನಾಡಿದ ಅವರು, ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯಕ್ ಭಾನುವಾರ ಬೆಂಗಳೂರಿಗೆ ಬರುತ್ತಿದ್ದಾಗ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯರೊಬ್ಬರು ನಾಳೆ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರು ಜ್ಯೋತಿಷಿಯೇನಲ್ಲ ಎಂದು ಆರೋಪಿಸಿದರು.
ಸುರೇಶ್ ಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಇದರರ್ಥ ನಾನು ಸಿಎಂ ಅವರೊಂದಿಗೆ ಮೊದಲೇ ಕೈ ಜೋಡಿಸಿದ್ದೆ ಎಂದಾಗುತ್ತದೆ. ಇದು 50 ಕೋಟಿ ರೂ. ಕೊಟ್ಟಿದ್ದಕ್ಕಿಂತ ದೊಡ್ಡ ಆರೋಪವಾಗುತ್ತದೆ ಎಂದರು. ಬಳಿಕ ನಾನು ಸ್ಪೀಕರ್ ಬಗ್ಗೆ ಆರೋಪಿಸಿಲ್ಲ. ಬದಲಿಗೆ ಆಡಳಿತ ಪಕ್ಷದ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ರೂಪಕವಾಗಿ ವಿವರಿಸಿದ್ದಾಗಿ ಸುರೇಶ್ ಕುಮಾರ್ ಸ್ಪಷ್ಟೀಕರಣ ನೀಡಿದರು.