ಬೆಂಗಳೂರು
ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ಕದಿರೇನಹಳ್ಳಿಯ ಕರ್ನಾಟಕ ಬ್ಯಾಂಕ್ನ ಎಟಿಎಂ ಕೇಂದ್ರದ ಸೆಕ್ಯೂರಿಟಿ ಗಾರ್ಡ್ ಒಬ್ಬರ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಕದಿರೇನಹಳ್ಳಿಯ ಕರ್ನಾಟಕ ಬ್ಯಾಂಕ್ ಎಟಿಎಂನ ಕಾವಲಿಗಿದ್ದ ಗೌಡನ ಪಾಳ್ಯದ ಲಿಂಗಪ್ಪ (65)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಬಾಗಲಕೋಟೆ ಮೂಲದ ಲಿಂಗಪ್ಪ ಖಾಸಗಿ ಎಫ್ಐಎಫ್ ಸೆಕ್ಯೂರಿಟಿ ಏಜೆನ್ಸಿಯ ನಿಯೋಜನೆಯ ಮೇಲೆ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದ ಕಾವಲಿಗಿದ್ದರು. ಶೆಕೆಯ ಕಾರಣಕ್ಕೆ ರಾತ್ರಿ ಎಟಿಎಂ ಕೇಂದ್ರದ ಮೇಲಿನ ಕಟ್ಟಡಕ್ಕೆ ಹೋಗುವ ಮೆಟ್ಟಿಲುಗಳ ಬಳಿಯ ಖಾಲಿ ಜಾಗದಲ್ಲಿ ಮಲಗಿದ್ದರು.
ಈ ವೇಳೆ ಬಂದ ದುಷ್ಕರ್ಮಿಗಳು ಲಿಂಗಪ್ಪ ಅವರ ಜೇಬುಗಳನ್ನು ಚೆಕ್ ಮಾಡಿ ಹಣ ದೊರೆಯದಿದ್ದರಿಂದ ಗಲಾಟೆ ತೆಗೆದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಎಟಿಎಂ ಒಳ ನುಗ್ಗುವುದಾಗಲಿ, ಯಂತ್ರವನ್ನು ಹಾಳು ಮಾಡುವುದಾಲಿ ಮಾಡಿಲ್ಲ.
ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಬಂದ ಸಾರ್ವಜನಿಕರೊಬ್ಬರು ಬೆಳಿಗ್ಗೆ 4.30ರ ವೇಳೆ ಲಿಂಗಪ್ಪ ಕೊಲೆಯಾಗಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಅಜರೇಶ್ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಎಟಿಎಂ ಕೇಂದ್ರದ ಹೊರ ಭಾಗದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ