ಬೆಂಗಳೂರು
ಬಂಧಿಸಲು ಬಂದ ಪೊಲೀಸರ ಮೇಲೆ ಲಾಂಗ್ನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ರೌಡಿ ಅರುಣ್ ಅಲಿಯಾಸ್ ಲಾಂಗ್ ಅರುಣ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡೇಟು ತಗುಲಿರುವ ಅರುಣ್ಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಪೇದೆಗಳಾದ ಅರುಣ್ ಹಾಗೂ ಮಂಜುನಾಥ್ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ
ಕೊಲೆ, ಕೊಲೆಯತ್ನ, ಬೆದರಿಕೆ, ಸುಲಿಗೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಲಾಂಗ್ ಅರುಣ್ ತನ್ನ ಸಹಚರ ಸುರೇಶ್ನೊಂದಿಗೆ ಗೌರಿಬಿದನೂರು ತಾಲೂಕಿನ ಕುರೂಡಿ ಕ್ರಾಸ್ ಬಳಿಯಿರುವ ಖಚಿತ ಮಾಹಿತಿ ಮೇರೆಗೆ ಸಬ್ಇನ್ಸ್ಪೆಕ್ಟರ್ ಅವಿನಾಶ್ ಹಾಗೂ ಸಿಬ್ಬಂದಿ ಬಂಧನಕ್ಕೆ ತೆರಳಿದರು.
ಈ ವೇಳೆ ಅಲ್ಲಿದ್ದ ರೌಡಿ ಸುರೇಶ್ ಹಾಗೂ ಮಾರುತಿ ಅಲಿಯಾಸ್ ಫೋಲಾರ್ಡ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಅರುಣ್ ಪರಾರಿಯಾಗಲು ಯತ್ನಿಸಿದ್ದು, ಬಂಧಿಸಲು ಮುಂದಾದ ಪೊಲೀಸರ ಮೇಲೆ ಲಾಂಗ್ ನಿಂದ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಲಾಂಗ್ ದೂರ ಎಸೆದು ಶರಣಾಗುವಂತೆ ಪಿಎಸ್ಐ ಅವಿನಾಶ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಲಾಂಗ್ ಕೆಳಗಿಳಿಸದ ಅರುಣ್ ಮೇಲೆ ಪಿಎಸ್ಐ ಅವಿನಾಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಕುಸಿದು ಬಿದ್ದು ಗಾಯಗೊಂಡಿದ್ದ ಅರುಣ್ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಕಳೆದ ವಿಧಾನಸಭಾ ಚುನಾವಣಾ ವೇಳೆ ಕೋಟಾಲದಿನ್ನೆ ಬಳಿಯ ಬಾರ್ ಬಳಿ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಎಂಬಾತ ಬರ್ಬರವಾಗಿ ಕೊಲೆಯಾಗಿದ್ದನು. ಈ ಪ್ರಕರಣ ಸೇರಿದಂತೆ ಐಪಿಸಿ ಸೆಕ್ಷೆನ್ 307, 302 ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 7 ಪ್ರಕರಣಗಳಲ್ಲಿ ಈ ಲಾಂಗ್ ಅರುಣ್ ಪೊಲೀಸರಿಗೆ ಬೇಕಾಗಿದ್ದನು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ