ಚಳ್ಳಕೆರೆ
ಶಾಲಾ ಮಕ್ಕಳು ಕಲಿಕೆಯ ಹಂತದಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಎಸ್ಆರ್ಎಸ್ ವಿದ್ಯಾಸಂಸ್ಥೆ ತಮ್ಮ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ವ್ಯವಹಾರಿಕ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವೆಂದು ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಚಿತ್ರದುರ್ಗಯ ಖಾಸಗಿ ಬಸ್ಟಾಂಡ್ ನಿಲ್ದಾಣದ ಲೋಕೋಪಯೋಗಿ ಕಚೇರಿ ಮುಂಭಾಗದಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಕ್ಕಳ ಸಂತೆ ಕಾರ್ಯಕ್ರಮವನ್ನು ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು. ತರಕಾರಿ ಮಾರಾಟದಲ್ಲೂ ಸಹ ಶಾಲೆಯ ಮಕ್ಕಳು ಹೆಚ್ಚು ಉತ್ಸಾಹದಿಂದ ಲವಲವಿಕೆಯಿಂದ ಗ್ರಾಹಕರಿಗೆ ತರಕಾರಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದನ್ನು ಗಮನಿಸಿದ ವೃತ್ತ ನಿರೀಕ್ಷಕರು ಮಕ್ಕಳ ವ್ಯವಹಾರಿಕ ಜ್ಞಾನ ಸಂತಸ ತಂದಿದೆ ಎಂದರು.
ಆಡಳಿತಾಧಿಕಾರಿ ಆತ್ಮಾನಂದ ಮಾತನಾಡಿ, ಎಸ್ಆರ್ಎಸ್ ವಿದ್ಯಾಸಂಸ್ಥೆ ಪ್ರತಿವರ್ಷವೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ವಿದ್ಯಾರ್ಥಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಆಗುವ ಅನೇಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಉಪಯುಕ್ತವಾಗುತ್ತದೆ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ನಿರೀಕ್ಷೆಗೂ ಮೀರಿ ಯಶಸ್ಸಿಯಾಗುತ್ತಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ವಿಜಯ್, ಶಿಕ್ಷಕರಾದ ಚಿತ್ರ, ದೇವರಾಜ್, ತಾಹೀರ್, ಅರುಣ್, ಸುಮಾ, ಸೌಮ್ಯ, ಸುಜಾತ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ