ಬೆಂಗಳೂರು
ಮಾನಸಿಕ ಖಿನ್ನತೆಗೊಳಗಾಗಿದ್ದ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗನನ್ನು ನೇಣು ಬಿಗಿದು ಕೊಲೆ ಮಾಡಿ ತಾನು ನೇಣಿಗೆ ಶರಣಾಗಿರುವ ಧಾರುಣ ಘಟನೆ ಚಂದ್ರ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣ ನಗರದಲ್ಲಿ ನಡೆದಿದೆ.
ಕಲ್ಯಾಣ ನಗರದ 4ನೇ `ಟಿ` ಮುಖ್ಯರಸ್ತೆಯ ಪ್ರತಿಮಾ ಮಂಗಳೂ¾್ಕರ್ (28) ಮಗ ಸಾತ್ವಿಕ್ನನ್ನು ಶನಿವಾರ ರಾತ್ರಿ 8ರ ವೇಳೆ ನೇಣು ಬಿಗಿದು ಕೊಲೆ ಮಾಡಿ ಫ್ಯಾನಿಗೆ ನೇತುಹಾಕಿ ಅದೇ ಫ್ಯಾನಿಗೆ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಬಕಾರಿ ಇಲಾಖೆ ಆಯುಕ್ತರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಕಾರವಾರದ ಮೂಲದ ಸಂತೋಷಶೆಟ್ಟಿ ಅಲಿಯಾಸ್ ಸುಗಮ ಶೆಟ್ಟಿಯನ್ನು ಯಲ್ಲಾಪುರ ಮೂಲದ ಪ್ರತಿಮಾ ಮಂಗಳೂ¾್ಕರ್ ಅವರು 4 ವರ್ಷಗಳ ಹಿಂದೆ ಮದುವೆಯಾಗಿದ್ದರು.
ವಿವಾಹದ ನಂತರ ದಂಪತಿಯು ಕಲ್ಯಾಣ ನಗರದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಸಾತ್ವಿಕ್ ಒಬ್ಬನೇ ಮಗನಾಗಿದ್ದಾನೆ. ಚುನಾವಣಾ ಹಿನ್ನೆಲೆಯಲ್ಲಿ ಸಂತೋಷ್ ಶೆಟ್ಟಿಯವರು ಕಛೇರಿಯಲ್ಲಿ ಸಭೆ ಇದ್ದುದರಿಂದ ತಡವಾಗಿ ರಾತ್ರಿ ಮನೆಗೆ ಬಂದಿದ್ದು ಅಷ್ಟರೊಳಗೆ ಪ್ರತಿಮಾ ಮನೆಯ ಮುಂಭಾಗಿಲ ಚಿಲಕ ಹಾಕಿ ಮಗನೊಂದಿಗೆ ನೇಣಿಗೆ ಶರಣಾಗಿದ್ದಾರೆ.
ಹಲವು ಬಾರಿ ಬಡಿದರೂ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡ ಸುಗಮಶೆಟ್ಟಿ ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು ಕೂಡಲೇ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರತಿಮಾ ಅವರು ದೇವರೇ ನನ್ನ ಕ್ಷಮಿಸು, ಬದುಕಲು ನನಗೆ ಇಷ್ಟವಿಲ್ಲ. ನನ್ನ ಪತಿಯನ್ನು ಚೆನ್ನಾಗಿ ನೋಡಿಕೋ ತಂದೆ, ತಾಯಿಗಳು ಕ್ಷಮಿಸಲಿ ಎನ್ನುವ ಪತ್ರ ಬರೆದಿಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಚಂದ್ರಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಕಲ್ಲಪ್ಪ ಅವರು ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರವಿಚನ್ನಣ್ಣವರ್ ತಿಳಿಸಿದ್ದಾರೆ.