ಚಳ್ಳಕೆರೆ
ತಾಲ್ಲೂಕಿನಾದ್ಯಂತ ಪ್ರಸ್ತುತ ವರ್ಷವೂ ಸಹ ಮಳೆ ಸಕಾಲಕ್ಕೆ ಆಗಮಿಸದೆ ಕೈಕೊಟ್ಟ ಹಿನ್ನೆಲೆಯಲ್ಲಿ ಮತ್ತೆ ರೈತ ಸಮುದಾಯ ಹೆಚ್ಚಿನ ಪ್ರಮಾಣದ ನಷ್ಟದತ್ತ ಸಾಗಿದೆ. ಈಗಾಗಲೇ ತಾಲ್ಲೂಕು ಆಡಳಿತ ಶೇಂಗಾ ಬೆಳೆನಷ್ಟ ಪರಿಹಾರ ನೀಡುವ ನಿಟ್ಟಿನಲ್ಲಿ ಮೊಬೈಲ್ ಆಫ್ ಮೂಲಕ ಸಮೀಕ್ಷೆ ರೈತರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆರೋಪಿಸಿದ್ಧಾರೆ.
ಕಳೆದ ವಾರ ಕೇವಲ ಎರಡು ದಿನ ಮಾತ್ರ ಅಲ್ಪ ಮಳೆಯಾಗಿದ್ದು, ಶೇಂಗಾ ಬೆಳೆಯಲ್ಲಿ ಚೇತರಿಕೆ ಕಂಡಿತ್ತು. ಆದರೆ, ಮತ್ತೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾರಸಗಟಾಗಿ ಎಲ್ಲೂ ಬೆಳೆ ಇಲ್ಲದೆ ಮತ್ತೆ ನಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ತಾಲ್ಲೂಕು ಆಡಳಿತ, ಕೃಷಿ ಇಲಾಖೆ, ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಬೆಳೆ ನಷ್ಟ ಪರಿಹಾರ ಕುರಿತು ಸಮೀಕ್ಷೆ ನಡೆಸುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರದ ಕೊರತೆಯಿಂದ ರೈತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ.
ಗ್ರಾಮ ಪಂಚಾಯಿತಿ ಆಡಳಿತದ ವತಿಯಿಂದ ಟಾಂಟಾಂ ಮೂಲಕ ಜನರಿಗೆ ವಿಷಯ ತಿಳಿಸಿದರೂ ಗ್ರಾಮದಲ್ಲಿ ಇರದ ರೈತರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸಂಬಂಧಪಟ್ಟ ರೈತ ತನ್ನ ದಾಖಲಾತಿಗಳೊಂದಿಗೆ ಜಮೀನಲ್ಲಿ ಖುದ್ದಾಗಿ ಹಾಜರಿರಬೇಕಿದೆ. ಅವನ ಸಮಕ್ಷಮದಲ್ಲೇ ಸಮೀಕ್ಷೆ ನಡೆಸಬೇಕಿದೆ. ಆದರೆ, ಬಹುತೇಕ ಕಡೆಗಳಲ್ಲಿ ರೈತರ ಗೈರು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಮೀಕ್ಷೆ ನಡೆಸುವ ಅಧಿಕಾರಿಗಳು ಇನ್ನೂ ಹೆಚ್ಚಿನ ಪ್ರಚಾರ ಕೈಗೊಂಡು ರೈತರಿಗೆ ಆಗಿರುವ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಮಾಡಬೇಕೆಂದು ಕೆ.ಪಿ.ಭೂತಯ್ಯ ಆಗ್ರಹಿಸಿದ್ಧಾರೆ.
ಈ ಬಗ್ಗೆ ತಹಶೀಲ್ದಾರ್ ಟಿ.ಸಿ.ಕಾಂತರಾಜರವರನ್ನು ಸಂಪರ್ಕಿಸಿದಾಗ ಈಗಾಗಲೇ ಬೆಳೆ ಸಮೀಕ್ಷೆಯ ಬಗ್ಗೆ ಎರಡ್ಮೂರು ಬಾರಿ ಪತ್ರಿಕಾಗೋಷ್ಠಿ ಮೂಲಕ ರೈತ ಸಮುದಾಯಕ್ಕೆ ಮಾಹಿತಿ ತಿಳಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರತಿಗ್ರಾಮದಲ್ಲೂ ಟಾಂಟಾಂ ಮೂಲಕ ಜಾಗೃತಿಗೊಳಿಸಿದ್ದಾರೆ. ತಾಲ್ಲೂಕು ಆಡಳಿತ ಅಧಿಕಾರಿಗಳ ಸಹಯೋಗದೊಂದಿಗೆ ರೈತ ಸಮುದಾಯಕ್ಕೆ ಹೆಚ್ಚು ಪರಿಹಾರ ಸಿಗಲಿ ಎಂಬ ದೃಷ್ಠಿಯಿಂದ ಕರಾರೂ ಒಕ್ಕಾಗಿ ಸಮೀಕ್ಷೆ ಮಾಡಲಾಗುತ್ತಿದೆ. ರೈತ ಮುಖಂಡರೂ ಸಹ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕಿದೆ. ತಾಲ್ಲೂಕು ಆಡಳಿತದೊಂದಿಗೆ ರೈತ ಪ್ರತಿನಿಧಿಗಳು ಸಹ ಸಹಕಾರ ನೀಡಿದಲ್ಲಿ ಈ ಸಮೀಕ್ಷೆ ಯಶಸ್ಸಿಯಾಗಿ ಪೂರೈಸಲು ಸಹಕಾರಿಯಾಗುತ್ತದೆ ಎಂದಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ