ಬೆಂಗಳೂರು
ಚಿಕ್ಕಬಳ್ಳಾಪುರದ ರೆಡ್ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿ ಲಕ್ಷಾಂತರ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿರುವ ಮೇಲ್ವಿಚಾರಕನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಾಜ್ಯದಲ್ಲೇ ಮಾದರಿ ರಕ್ತನಿಧಿ ಕೇಂದ್ರ ಎಂದು ಹೆಸರು ಗಳಿಸಿರುವ ಚಿಕ್ಕಬಳ್ಳಾಪುರದ ಬ್ಲಡ್ ಬ್ಯಾಂಕ್ನಲ್ಲಿ ಸಂಸ್ಥೆಯ ಮೇಲ್ವಿಚಾರಕ ರವಿ ಲಂಬಾಣಿ ಎಂಬಾತ ಬರೋಬ್ಬರಿ 13 ಲಕ್ಷ ರೂಪಾಯಿ ಮೌಲ್ಯದ ರಕ್ತದ ಉತ್ಪನ್ನ ಪ್ಲಾಸ್ಮಾವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ ಎಂದು ದೂರು ದಾಖಲಿಸಲಾಗಿದೆ
ರವಿ ಲಂಬಾಣಿ ರಕ್ತದಿಂದ ಬೇರ್ಪಡಿಸುವ ದುಬಾರಿ ಮೌಲ್ಯದ ಪ್ಲಾಸ್ಮಾವನ್ನು ಅಕ್ರಮವಾಗಿ ಕೆಲವು ಕಂಪನಿಗಳಿಗೆ ಮಾರಾಟ ಮಾಡಿ, ಬರೋಬ್ಬರಿ 13 ಲಕ್ಷ ರೂಗಳ ವಂಚನೆ ನಡೆಸಿದ್ದಾನೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಆರೋಪಿಸಿ ದೂರು ನೀಡಿದೆ.
ರಕ್ತನಿಧಿ ಕೇಂದ್ರದಲ್ಲಿ ಪ್ಲಾಸ್ಮಾ ಬೇರ್ಪಡಿಸಿದ ನಂತರ ರಿಲಯನ್ಸ್ ಕಂಪನಿಗೆ ಕೆಜಿ ಲೆಕ್ಕದಲ್ಲಿ ಮಾರಾಟವಾಗುತ್ತಿತ್ತು ಆದರೆ ಆರೋಪಿ ರವಿ ಹೆಮರಸ್ ಎನ್ನುವ ಹೈದರಾಬಾದ್ ಮೂಲದ ಕಂಪನಿಗೆ ಪ್ಲಾಸ್ಮಾ ಮಾರಾಟಕ್ಕೆ ಒಪ್ಪಂದ ಮಾಡಿಸಿದ್ದಾನೆ. 2015 ರಿಂದ 2016ರವರೆಗೆ 1726 ಲೀಟರ್ ಬ್ಲಡ್ ಪ್ಲಾಸ್ಮಾ ಉತ್ಪಾದನೆಯಾಗಿದ್ದರೂ ರವಿ 880 ಲೀಟರ್ ಪ್ಲಾಸ್ಮಾ ಮಾತ್ರ ಉತ್ಪಾದನೆಯಾಗಿದೆ ಎಂದು ಲೆಕ್ಕ ತೋರಿಸಿ ವಂಚಿಸಿದ್ದಾನೆ.ಈ ಬಗ್ಗೆ ವಿಚಾರಿಸಿದರೆ ನನ್ನದೇನು ತಪ್ಪಿಲ್ಲ, ಹಿಂದಿನ ಕಾರ್ಯದರ್ಶಿಗಳು ಹೇಳಿದಂತೆ ಮಾಡಿದ್ದೇನೆ ಎಂದು ಉತ್ತರಿಸುತ್ತಿದ್ದಾನೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೆಡ್ಕ್ರಾಸ್ ಆಡಳಿತ ಮಂಡಳಿ, ತಮಗೆ ನಷ್ಟವಾಗಿರುವ ಹಣ ಕೊಡಿಸಿ, ಆರೋಪಿ ರವಿ ಲಂಬಾಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ