ಶಿರಾ
ಚಿಕ್ಕಬಾಣಗೆರೆ ಉಪ ಸ್ಥಾವರದಿಂದ ಪ.ನಾ.ಹಳ್ಳಿ ಉಪ ಸ್ಥಾವರಕ್ಕೆ 66/11 ಕೆ.ವಿ.ಯ ವಿದ್ಯುತ್ ಗೋಪುರ ಲೈನ್ ಕಾಮಗಾರಿ ನಿರ್ಮಾಣಕ್ಕೆ ರೈತರ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಗುತ್ತಿಗೆಯನ್ನು ಪಡೆದ ಖಾಸಗಿ ಕಂಪನಿಯವರು ರೈತರಿಗೆ ನ್ಯಾಯ ಸಮ್ಮತವಾದ ಪರಿಹಾರ ನೀಡದೆ ಅನ್ಯಾಯವೆಸಗಿದು,್ದ ಈ ಕೂಡಲೇ ನ್ಯಾಯ ಸಮ್ಮತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರುಸೇನೆಯ ವತಿಯಿಂದ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಚಿಕ್ಕಬಾಣಗೆರೆ 66/11ಕೆ.ವಿ. ವಿದ್ಯುತ್ ಉಪ ಸ್ಥಾವರಕ್ಕೆ ಕಂಬ ಮತ್ತು ಲೈನ್ ಕಾಮಗಾರಿಯನ್ನು ಕೆ.ಪಿ.ಟಿ.ಸಿ.ಎಲ್. ಸಂಸ್ಥೆಯಡಿಯಲ್ಲಿ ಗ್ಲೋಬಲ್ಟೆಕ್ ಪಾರ್ಕ್ ಪ್ರೈ.ಲಿ. ಸೋಲಾರ್ ಸಂಸ್ಥೆಯವರು ಕಾಮಗಾರಿ ಕೈಗೊಂಡಿದ್ದು ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯ ಸಮ್ಮತವಲ್ಲದ ಪರಿಹಾರ ನೀಡಿದ್ದಾರೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಆರೋಪಿಸಿದರು.
2017-16ರಲ್ಲಿ ಇದೇ ಗ್ಲೋಬಲ್ ಕಂಪನಿಯವರು ಹುಲಿಕುಂಟೆ ಹೋಬಳಿಯ ಹೊಸಕೋಟೆ ಗ್ರಾಮದ ಬಳಿ ಸೋಲಾರ್ ಪ್ಲಾಂಟ್ 20 ಮೆಗಾವ್ಯಾಟ್ ವಿದ್ಯುತ್ನ್ನು ಚಿಕ್ಕಬಾಣಗೆರೆ ವಿದ್ಯುತ್ ಸ್ಥಾವರಕ್ಕೆ ನೀಡಲು ಒಪ್ಪಂದ ಪಡೆದಿದ್ದು ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಎ ಯಿಂದ ಸಿ ವಿದ್ಯುತ್ ಕಂಬಗಳಿಗೆ 2.50 ಲಕ್ಷ ರೂ, ಡಿ ವಿದ್ಯುತ್ ಕಂಬಕ್ಕೆ 4 ಲಕ್ಷ ರೂ.ಗಳನ್ನು ರೈತರಿಗೆ ಪರಿಹಾರವಾಗಿ ನೀಡಿದ್ದು ಈಗ 2018-19ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗೆ ಕಡಿಮೆ ಪರಿಹಾರ ನೀಡಲಾಗಿದೆ ಎಂದರು.
ಇದೀಗ ಕೈಗೊಂಡಿರುವ ಕಾಮಗಾರಿಯಲ್ಲಿ ಚಿಕ್ಕಬಾಣಗೆರೆ, ಹುಲಿಕುಂಟೆ, ವೀರಬೊಮ್ಮನಹಳ್ಳಿ, ಯಾದಲಡಕು, ಕ್ಯಾದಿಗುಂಟೆ, ಹೊಸಹಳ್ಳಿ, ನೇರಲಹಳ್ಳಿ ಮತ್ತು ನಾದೂರಿನ 66/11 ವಿದ್ಯುತ್ ಉಪಸ್ಥಾವರಕ್ಕೆ ಕಂಬ ಮತ್ತು ಲೈನ್ ಕಾಮಗಾರಿ ನಡೆಸಿದ್ದು ಇಲ್ಲಿ ಸ್ವಾಧೀನ ಮಾಡಿಕೊಂಡ ಭೂಮಿಗೆ ಎ ಯಿಂದ ಸಿ ವಿದ್ಯುತ್ ಕಂಬಗಳಿಗೆ 1.60 ಲಕ್ಷ ರೂ, ಡಿ ವಿದ್ಯುತ್ ಕಂಬಕ್ಕೆ 2 ಲಕ್ಷ ರೂಗಳನ್ನು ರೈತರಿಗೆ ಪರಿಹಾರ ನೀಡುವ ಮೂಲಕ ಗ್ಲೋಬಲ್ ಸಂಸ್ಥೆಯು ನ್ಯಾಯಸಮ್ಮತವಲ್ಲದ ಪರಿಹಾರ ನೀಡಿದ್ದು ಈ ಕೂಡಲೇ ನ್ಯಾಯ ದೊರಕಿಸುವಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂಬಂಧ ಗ್ರೇಡ್-2 ತಹಸೀಲ್ದಾರ್ ಕಮಲಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಈರಗ್ಯಾತಪ್ಪ, ಭೂಸಂತ್ರಸ್ಥರಾದ ಪಿ.ಎಂ.ನಾಗರಾಜು, ಬಿ.ಜಿ.ನಾಗರಾಜು, ರಾಮಕೃಷ್ಣಪ್ಪ, ಹಾಲಿಲಿಂಗಪ್ಪ, ಈಶ್ವರಪ್ಪ, ಕೊಡೆತಿಮ್ಮಯ್ಯ, ರಂಗನಾಥ್, ಮರಡಿ ರಂಗನಾಥ್ ಸೇರಿದಂತೆ ಅನೇಕ ಮಂದಿ ರೈತರು ಪ್ರತಿಭಟನೆಯಲ್ಲಿ ಹಾಜರಿದ್ದರು.