ಚಳ್ಳಕೆರೆ
ನಗರದ 10ಕ್ಕೂ ಹೆಚ್ಚು ರಸ್ತೆಗಳನ್ನು ಅಗಲೀಕರಣದೊಂದಿಗೆ ಡಾಂಬರೀಕರಣಗೊಳಿಸಲಾಗಿದೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇದುವರೆಗೂ ಕೈಗೊಂಡ ಎಲ್ಲಾ ರಸ್ತೆ ಕಾಮಗಾರಿಗಳು ತೃಪ್ತಿಕರವಾಗಿವೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಅವರು, ಶುಕ್ರವಾರ ತ್ಯಾಗರಾಜ ನಗರ, ಸೈನಿಕ ಆಸ್ಪತ್ರೆ, ಎಲ್ಐಸಿ ಕಚೇರಿ ರಸ್ತೆ, ಡಿ.ವೀರಣ್ಣ ಲೇಔಟ್, ಬೆಂಗಳೂರು ಎಪಿಎಂಸಿ ಯಾರ್ಡ್ ಪಕ್ಕದ ರಸ್ತೆ, ದತ್ತ ಮಂದಿರ ಪಾರ್ಕ್ ರಸ್ತೆ ಮುಂತಾದ ಕಡೆಗಳಲ್ಲಿ ಶುಕ್ರವಾರ ಭೇಟಿ ನೀಡಿ ರಸ್ತೆಯ ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಕಳೆದ ಸುಮಾರು 15 ದಿನಗಳಿಂದ ನಗರೋತ್ಥಾನ ಯೋಜನೆಯ 25 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಪೈಕಿ ರಸ್ತೆ ನಿರ್ಮಾಣ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು. ಪ್ರತಿ ಹಂತದಲ್ಲೂ ರಸ್ತೆ ಡಾಂಬರೀಕರಣ ಮಾಡುವ ಸಂದರ್ಭದಲ್ಲಿ ನಮ್ಮ ಇಲಾಖೆಯ ಇಂಜಿನಿಯರ್ ಮಾರ್ಗದರ್ಶನದಲ್ಲೇ ಕಾರ್ಯನಿರ್ವಹಿಸಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿ ನಗರದ ಅಭಿವೃದ್ಧಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದ್ಧಾರೆ.
ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಮಾತನಾಡಿ, ರಸ್ತೆಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರಥಮ ಆದ್ಯತೆ ನೀಡಲಾಗಿದೆ. ಡಾಂಬರ್ನ ಟೆಂಪರೇಚರ್ ಉತ್ತಮ ಮಟ್ಟದಾಗಿದ್ದು ರಸ್ತೆ ಕಾಮಗಾರಿಗಳಲ್ಲಿ ಕಳಪೆಯಾಗದಂತೆ ಜಾಗ್ರತೆ ವಹಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ