ದಾವಣಗೆರೆ :
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನವನ್ನು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವಹಿತಿಂದ ಬಹುಜನ ಸಮಾಜ ಸಂಕಲ್ಪ ದಿನವನ್ನಾಗಿ ಗುರುವಾರ ನಗರದಲ್ಲಿ ಆಚರಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಬಿಎಸ್ಪಿ ಕಾರ್ಯಕರ್ತರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಮಾಲೆ ಅರ್ಪಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಜಯ ಘೋಷ ಮೊಳಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಎಚ್.ಮಲ್ಲೇಶ್, ಬಹುಜನ ಸಮಾಜವು ಜಾಗೃತವಾಗಿ ಎಚ್ಚೆತ್ತುಕೊಳ್ಳುವ ದಿನ ಸಾಮಾಜಿಕ ವ್ಯವಸ್ಥೆಯನ್ನು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಚುನಾವಣೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ಹಕ್ಕು, ಅಧಿಕಾರಕ್ಕಾಗಿ ಮತ ಎಂಬ ಅಸ್ತ್ರವನ್ನು ನೀಡಿದ್ದಾರೆ. ಆದರೆ, ಆ ಅಸ್ತ್ರವನ್ನು ನಾವು ಇಂದಿಗೂ ಸರಿಯಾಗಿ ಬಳಸಲಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಸಮಾನತೆ, ಸ್ವಾತಂತ್ರ, ಭ್ರಾತೃತ್ವಕ್ಕಾಗಿ ಒಬ್ಬ ಗುರುವಾಗಿ, ನಾಯಕನಾಗಿ ಒಂದು ಸಿದ್ಧಾಂತ, ಒಂದು ಬಾವುಟ, ಒಂದು ಚಿಹ್ನೆಯನ್ನು ಹೊಂದಿರುವ ಬಹುಜನ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಆಗಬೇಕು. ಇದಕ್ಕಾಗಿ ನಮ್ಮ ಅರಿವು, ಹಣ, ಸಮಯವನ್ನು ಮುಡಿಪಾಗಿಟ್ಟು, ಏನೇ ಸಮಸ್ಯೆಗಳು ಎದುರಾದರೂ ನಮ್ಮ ನಿಲುವು ದೃಢವಾಗಿರಲಿ ಎಂಬ ಸಂಕಲ್ಪವನ್ನು ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದಂದು ನಾವೆಲ್ಲರೂ ಬಹುಜನ ಸಮಾಜ ಸಂಕಲ್ಪ ದಿನವಾಗಿ ಆಚರಿಸುತ್ತಿದ್ದೇವೆ ಎಂದರು.
ಶೋಷಿತ ಸಮುದಾಯಗಳ ವಿಮೋಚನೆಗಾಗಿ ಅಂಬೇಡ್ಕರ್ ಸಮರ್ಪಿಸಿದ ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವ, ಅಸಹನೆಯನ್ನು ಆಸ್ಪೋಟಿಸುವ ಸನ್ನಿವೇಶದಲ್ಲಿ ದಲಿತ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತರು, ವಿದ್ಯಾರ್ಥಿ, ಯುವಜನರು, ಮಹಿಳಾ ಪೀಳಿಗೆಯನ್ನು ಜಾಗೃತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷವು ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ಇಂತಹದ್ದೊಂದು ಕಾರ್ಯಕ್ಕೆ ಮುಂದಾಗಿದೆ. ಇನ್ನಾದರೂ ಅಲ್ಪಸಂಖ್ಯಾತ, ಹಿಂದುಳಿತ, ದಲಿತ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ಎಲ್.ಎಚ್.ಮಂಜುನಾಥ ಲೋಕಿಕೆರೆ, ಮುಖಂಡರಾದ ಡಿ.ಹನುಮಂತಪ್ಪ, ಬಿ.ತಿಪ್ಪೇರುದ್ರಪ್ಪ, ವೆಂಕಟೇಶ ಬಾಬು, ಬಿ.ಎನ್.ನಾಗೇಶ, ಜಿ.ಎನ್.ಮಲ್ಲಿಕಾರ್ಜುನ, ಮೋಹನ ದಾಸ್, ಪ್ರಕಾಶ, ಬಿ.ವಿನಯಕುಮಾರ, ಶಿವಣ್ಣ, ಅಂಜಿನಪ್ಪ, ಹನುಮಂತಪ್ಪ, ಎಚ್.ಬಿ.ಶಿವಪ್ಪ, ಸತೀಶ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ