ಬೆಂಗಳೂರು
ಬೆಳಗಾವಿ ವಿಧಾನಮಂಡಲ ಚಳಿಗಾಲ ಅಧಿವೇಶನ ಹಿನ್ನೆಲೆ ಅನುದಾನ ಹಂಚಿಕೆ ಆರೋಪದಿಂದ ತಪ್ಪಿಸಿಕೊಳ್ಳಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಿದೆ. ಪ್ರತಿ ವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ 2 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಸರ್ಕಾರ ರಚನೆಯಾಗಿ 6 ತಿಂಗಳು ಸಂದಿವೆ. ಇಷ್ಟರೊಳಗೆ 3 ನೇ ಕಂತು ಬಿಡುಗಡೆಯಾಗಬೇಕಿತ್ತು. ಆದರೆ ಸರ್ಕಾರ ಬಿಡುಗಡೆಗೊಳಿಸಿಲ್ಲ.
ರಾಜ್ಯದಲ್ಲಿ ಬರ, ಅತಿವೃಷ್ಟಿ ಹಿನ್ನೆಲೆ 108 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನು 18-20 ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ. ಹೀಗಿದ್ದರೂ ಕೂಡ ಸರ್ಕಾರ ಶಾಸಕರ ಪ್ರದೇಶಾಭಿವೃದ್ಧಿಗೆ ನಿಧಿ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದರು. ಅಲ್ಲದೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಪರಿಷತ್ ಸದಸ್ಯರಿಗೆ ನೀಡಿಲ್ಲ ಎಂದು ಬಿಜೆಪಿಯೂ ದೂರಿತ್ತು. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಡಿಸೆಂಬರ್ 10 ರಂದು ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಹೋರಾಟಕ್ಕೆ ಸಿದ್ಧವಾಗಿತ್ತು.
ಚಳಿಗಾಲ ಅಧಿವೇಶನಕ್ಕೆ 3 ದಿನ ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಸರ್ಕಾರ ಇಂದು ಎರಡನೇ ಕಂತಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆಗೊಳಿಸಿದೆ. ಪ್ರತಿಪಕ್ಷದ ಟೀಕೆಯಿಂದ ಉಳಿದುಕೊಳ್ಳಲು ನಿಧಿ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ
ಆರ್ಥಿಕ ಇಲಾಖೆ 225 ವಿಧಾನಸಭಾ ಶಾಸಕರ ಕ್ಷೇತ್ರಗಳಿಗೆ ಹಾಗೂ 68 ವಿಧಾನ ಪರಿಷತ್ ಸದಸ್ಯರ ಕ್ಷೇತ್ರಗಳಿಗೆ 142 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ಕಳೆದ ಆಗಸ್ಟ್ 13 ರಂದು ಮೊಲದ ಕಂತಿನಲ್ಲಿ 142 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆ ಬಿಡುಗಡೆ ಮಾಡಿತ್ತು. ನವೆಂಬರ್ 29 ರಂದು ಪ್ರದೇಶಾಭಿವೃದ್ಧಿ ನಿಧಿ ಎರಡನೇ ಕಂತಿನ 147 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಈಗ ಬಿಡುಗಡೆಗೊಳಿಸಿರುವ ಎರಡನೇ ಕಂತಿನಲ್ಲಿ ಮೊಲದ ಕಂತಿನ ಅನುದಾನವನ್ನು ಸೇರಿಸಿ ವಿಧಾನ ಪರಿಷತ್ತಿನ ಕೆಲವು ಬಿಜೆಪಿ ಸದಸ್ಯರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ