ಹೊಸಪೇಟೆ :
ತಂತ್ರಜ್ಞಾನದ ಕೊಡುಗೆಯಿಂದ ಇಂದು ಲಕ್ಷಾಂತರ ಪುಸ್ತಕಗಳನ್ನು ಅಂಗೈ ಅಗಲದ ಕಿಂಡಲ್ ಮೂಲಕ ಓದುವ ಸೌಲಭ್ಯ ಒದಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಹೇಳಿದರು.
ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿದ್ದ ಕಿಂಡಲ್ ಸ್ಮಾರ್ಟ್ ರೀಡಿಂಗ್ ಜೋನ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳು ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದಿದ್ದು, ನಿಂತ ನೀರಿನಂತಿದ್ದ ಮಾಹಿತಿಯು ಈಗ ತಂತ್ರಜ್ಞಾನದ ನೆರವಿನಿಂದ ನಿರಂತರ ಪ್ರವಹಿಸುವ ಮಾರ್ಗಗಳಾಗಿ ಪರಿವರ್ತನೆಗೊಂಡಿದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲೇ ಪ್ರಪ್ರಥಮವಾಗಿ ಕಿಂಡಲ್ ಸ್ಮಾರ್ಟ್ ರೀಡಿಂಗ್ ಜೋನ್ ಸೌಲಭ್ಯವನ್ನು ಪಿಡಿಐಟಿಯು ಆರಂಭಿಸಿರುವುದು ಪ್ರಶಂಸಾನಾರ್ಹವಾಗಿದೆ ಎಂದರು.
ಪಿಡಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ ಮಾತನಾಡಿ, ಹೊಸಪೇಟೆಯ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯವು ಶ್ರಮವಹಿಸುತ್ತಿದೆ ಎಂದರು.
ಎಚ್ಡಿಎಫ್ಸಿ ಬ್ಯಾಂಕಿನ ವ್ಯವಸ್ಥಾಪಕ ವಿನಯ್ ಬಂಟ್ವಾಳ್, ಕಾಲೇಜು ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್, ಆಡಳಿತ ಮಂಡಳಿ ಸದಸ್ಯ ಏಕಾಂಬರೇಶ ತಾಂಡೂರು, ಅಧ್ಯಾಪಕಿಯರಾದ ಸಿಂಧೂ, ಪೂರ್ಣಿಮಾ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ