ಬೆಂಗಳೂರು
ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ನಲ್ಲಿ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಜರಗನಹಳ್ಳಿ ಬಳಿ ಭಾನುವಾರ ಮುಂಜಾನೆ ನಡೆದಿದೆ.
ಜರಗನಹಳ್ಳಿಯ ಜ್ಯೋತಿಲೇಔಟ್ನ ನೇಹಾಭಟ್(19)ಎಂದು ಮೃತಪಟ್ಟ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ,ಜ್ಯೋತಿ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ಓದುತ್ತಿದ್ದ ನೇಹಾಭಟ್ ಅವರು ಮುಂಜಾನೆ 5.45ರ ವೇಳೆ ಮನೆಯಿಂದ ಸ್ಕೂಟರ್ನಲ್ಲಿ ಟ್ಯೂಷನ್ಗೆ ಹೋಗುತ್ತಿದ್ದಾಗ ಕನಕಪುರ ಮುಖ್ಯರಸ್ತೆಯ ಜರಗನಹಳ್ಳಿ ಬಳಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೆಳಗೆಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನೇಹಾಭಟ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಟಿಪ್ಪರ್ ಲಾರಿ ಯನ್ನು ಬಿಟ್ಟು ಪರಾರಿಯಾಗಿದ್ದು ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಾಸಿಗೆ ಗೋಧಾಮಿಗೆ ಬೆಂಕಿ
ಹಾಸಿಗೆಗಳ ಗೊಡೌನ್ಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ನಷ್ಟವುಂಟಾಗಿರುವ ಘಟನೆ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಓಟಿಸಿ ದರ್ಗಾ ಬಳಿ ಶನಿವಾರ ರಾತ್ರಿ ನಡೆದಿದೆ.
ಓಟಿಸಿ ದರ್ಗಾದ ಮನ್ಸೂರ್ ಲೇನ್ನಲ್ಲಿರುವ ಆನಂದ್ ಕುಮಾರ್ ಎಂಬುವರಿಗೆ ಸೇರಿದ ಹಾಸಿಗೆಗಳ ಗೊಡೌನ್ಗೆ ರಾತ್ರಿ 11ರ ವೇಳೆ ವಿದ್ಯುತ್ ಶಾರ್ಟ್ಸಕ್ರ್ಯೂಟ್ನಿಂದ ಬೆಂಕಿ ತಗುಲಿ ಸ್ವಲ್ಪ ಹೊತ್ತಿನಲ್ಲೇ ಇಡೀ ಗೊಡೌನ್ ಆವರಿಸಿದೆ.
ಗೊಡೌನ್ನಿಂದ ಬೆಂಕಿ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 5 ವಾಹನಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿವೆ.
ಗೊಡೌನ್ನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಕರಣ ದಾಖಲಿಸಿರುವ ಕಾಟನ್ಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾರಿಗೆ ಬೆಂಕಿ
ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ರಸ್ತೆಯಲ್ಲಿ ಚಲಿಸುತ್ತಿದ್ದ ತವೇರಾ ಕಾರಿಗೆ ಬೆಂಕಿ ತಗುಲಿದ್ದು, ಅದರಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ವಾಹನ ನಿಲ್ಲಿಸಿ ಅದರಲ್ಲಿದ್ದವರನ್ನು ಕೆಳಗಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರು ಆವರಿಸಿ ಸುಟ್ಟು ಹೋಗಿದೆ. ಬ್ಯಾಟರಿಯಲ್ಲಿನ ಶಾರ್ಟ್ಸಕ್ರ್ಯೂಟ್ನಿಂದ ಈ ಬೆಂಕಿ ಅವಘಡ ಸಂಭವಿಸಿದೆ. ಕೆಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ