ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಡಿಸಿ ರಮೇಶ್

ದಾವಣಗೆರೆ :

     ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ನಿರ್ದೇಶನದಂತೆ ರಾಜ್ಯದಲ್ಲಿ ಅತೀ ಹೆಚ್ಚು ಮಾಲಿನ್ಯ ಹೊಂದಿರುವ 10 ನಗರಗಳಲ್ಲಿ ದಾವಣಗೆರೆ ನಗರವೂ ಒಂದಾಗಿದ್ದು, ತಕ್ಷಣವೇ ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಮಾಲಿನ್ಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು. 

      ಜಿಲ್ಲಾಡಳಿತ ಭವನದಲ್ಲಿಂದು ನಡೆದ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದಿನೇ ದಿನೇ ಹೆಚ್ಚಾಗುತ್ತಿರುವ ಮಾಲಿನ್ಯ ನಿಯಂತ್ರಣ ಹತೋಟಿಗೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗೆಗೆ ಚರ್ಚಿಸಿಲಾಯಿತು.ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ಅಧಿಕಾರಿ ಸಿ.ಡಿ.ಕುಮಾರ್ ಮಾತನಾಡಿ, ಕಳೆದ 15-20 ವರ್ಷಗಳಿಂದ ಮಾಲಿನ್ಯ ಪ್ರಮಾಣ ವಿಪರೀತ ಹೆಚ್ಚಾಗಿತ್ತಿದೆ. ಒಟ್ಟು ಶೇ.116 ರಷ್ಟು ಮಾಲಿನ್ಯ ಹೆಚ್ಚಾಗಿದ್ದು ಹತೋಟಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

      2011 ರಿಂದ 2015 ರವರೆಗೆ ಜಿಲ್ಲೆಯನ್ನು ಮಾಲಿನ್ಯಯುಕ್ತ ನಗರವೆಂದು ಘೋಷಣೆಯಾಗಿದ್ದು ಈ ಪ್ರಮಾಣವನ್ನು 12 ಪ್ಯಾರಾಮೀಟರ್‍ಗಳಲ್ಲಿ ಅಳೆಯಲಾಗುತ್ತದೆ. ಈ ಕುರಿತು 2016ರಲ್ಲಿ ಕ್ರಿಯಾ ಯೋಜನೆ ರೂಪಿಸಬೇಕಾಗಿತ್ತು. ಆದರೆ ಸಾದ್ಯವಾಗಲಿಲ್ಲ. ಪದೇ ಪದೇ ಕೇಂದ್ರ ಸರ್ಕಾರದಿಂದ ನಿರ್ದೇಶನಗಳು ಬರುತ್ತಿವೆ. ಇದರಂತೆ ಜಿಲ್ಲೆಯಲ್ಲಿ 6 ವಿಧದ ಮಾಲಿನ್ಯಗಳನ್ನು ಗುರುತಿಸಲಾಇದೆ.

      ಅವುಗಳಲ್ಲಿ ನಗರದಲ್ಲಿ ಸಂಚರಿಸುವ ವಾಹನಗಳಿಂದ ಉಂಟಾಗುವ ಮಾಲಿನ್ಯ, ರಸ್ತೆಯಲ್ಲಿ ಧೂಳಿನ ಪ್ರಮಾಣವನ್ನು ನಿಯಂತ್ರಿಸುವುದು , ಹೊಲಗದ್ದೆಗಳಲ್ಲಿ ಬೆಳೆದ ಕಬ್ಬು ಮತ್ತು ಭತ್ತದ ಕಟಾವಿನ ನಂತರ ಸುಡುವುದರಿಂದ ಉಂಟಾಗುವ ಮಾಲಿನ್ಯ, ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯ, ಕೈಗಾರಿಕೆಗಳಿಂದ ಹೊರಹೊಮ್ಮುವ ಮಾಲಿನ್ಯ, ಕಟ್ಟಡ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ರಲ್ಲಿ ಕಟ್ಟಡ ತ್ಯಾಜ್ಯಗಳ ವಸ್ತುಗಳ ನಿರ್ವಹಣೆ ಈ ಆರು ಅಂಶಗಳ ಬಗೆಗೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     ಜಿಲ್ಲಾಧಿಕಾರಿಗಳು ವಾಹನಗಳ ಎಮಿಷಿನ್ ಟೆಸ್ಟ್ ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ ಎಂಬ ಬಗೆಗೆ ಪ್ರಶ್ನಿಸಿದಾಗ, ಆರ್.ಟಿ.ಓ ಶ್ರೀನಿವಾಸ್ ಉತ್ತರಿಸಿ, ಕಳೆದ ಸಾಲಿನಲ್ಲಿ ಎಮಿಷನ್ ಟೆಸ್ಟ್ ಮಾಡಿಸಿದ ವಾಹನ ಸವಾರರಿಂದ ರೂ. 15 ಲಕ್ಷ ದಂಡ ವಸೂಲಿ ಮಾಡಲಾಗಿದೆ.

     ಈ ವರ್ಷದಲ್ಲಿ ರೂ. 4 ಲಕ್ಷ ದಂಡ ವಸೂಲಿಯಾಗಿದೆ ಎಂದರು. ಆದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ದಂಡ ಹಾಕುವುದರಿಂದ ಮಾಲಿನ್ಯ ನಿಯಂತ್ರಣ ಹತೋಟಿಗೆ ಬರುವುದಿಲ್ಲ. ದಂಡವನ್ನೇ ಹಾಕಿಸಿಕೊಳ್ಳದಂತೆ ವಾಹನ ಸವಾರರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಬೇಕೆಂದು ಹಾಗೂ ಎಷ್ಟು ವಾಹನಗಳ ಎಮಿಷಿನ್ ಟೆಸ್ಟ್ ಮಾಡಿಸಿಲ್ಲ ಎಂಬ ಮಾಹಿತಿ ಪಡೆದಿಕೊಳ್ಳಿ ಎಂದರು. ಹಾಗೂ ಇನ್ಶೂರೆನ್ಸ್ ಮಾಡಿಸುವ ಸಮಯದಲ್ಲೇ ಎಮಿಷನ್ ಟೆಸ್ಟ್ ಕಡ್ಡಾಯಗೊಳಿಸಿದರೆ ಅನುಕೂಲವಾಗಬಹುದು ಎಂದರು.

     ಪಿ.ಬಿ.ರಸ್ತೆಯ ಎರಡೂ ಬದಿ ಹೆಚ್ಚು ಧೂಳು ಸಂಗ್ರಹವಾಗುತ್ತಿದ್ದು ಅದನ್ನು ಸರಿಯಾಗಿ ನಿರ್ವಹಣೆ ಹಾಗೂ ಒಣತ್ಯಾಜ್ಯಗಳನ್ನು ಬಯಲಿನಲ್ಲಿ ಸುಡುವುದನ್ನು ಆದಷ್ಟು ನಿಯಂತ್ರಿಸಿ ಕಸ ಸರಿಯಾಗಿ ಡಂಪಿಂಗ್ ಯಾರ್ಡ್‍ಗೆ ಹೋಗುವಂತೆ ನೋಡಿಕೊಳ್ಳಿ ಎಂದು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

      ಸ್ಮಾರ್ಟ್ ನಗರದಲ್ಲಿ ರಸ್ತೆ ನಿರ್ಮಿಸುವಾಗ ಪಕ್ಕದಲ್ಲಿ ಸರಿಯಾದ ಫುಟುಪಾತ್ ಹಾಗೂ ರಸ್ತೆ ಬದಿ ಮರಗಳನ್ನು ನೆಡುವ ಮೂಲಕ ಹಸಿರನ್ನು ಹೆಚ್ಚಿಸಿ ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳಬಹುದು. ಹಾಗೂ ನಗರದ ರಸ್ತೆಗಳಲ್ಲಿರುವ ಪಾಟ್‍ಹೋಲ್‍ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಲು ಆದೇಶಿಸಿದರು. ಹಾಗೂ ಆಸಕ್ತರಿರುವ ಸಂಘ ಸಂಸ್ಥೆಗಳಿಗೆ ಪಿಪಿಪಿ ಮಾದರಿಯಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ನಿಬಂಧನೆಗಳಿಗೊಳಪಟ್ಟು ಅವರುಗಳಿಗೆ ವಹಿಸಬಹುದಾಗಿದೆ ಎಂದರು.

     ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಸುಂಕದ್ ಮಾತನಾಡಿ, ಪಾಲಿಕೆಯು ಈಗಾಗಲೇ ಮೂರು ಕಡೆ ಸ್ಥಳ ಗುರುತಿಸಲಾಗಿದ್ದು, ಆ ಸ್ಥಳಗಳಲ್ಲೇ ಕಟ್ಟಡಗಳ ತ್ಯಾಜ್ಯಗಳನ್ನು ಸುರಿಯಲು ತಿಳಿಸಲಾಗಿದೆ. ಹಾಗೂ ಈ ಪ್ರಕ್ರಿಯೆಗೆ ಏಜೆನ್ಸಿ ನೇಮಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಈಗಾಗಲೇ ಎರಡು ಉದ್ಯಾನವನಗಳನ್ನು ಖಾಸಗಿಯವರಿಗೆ ನಿರ್ವಹಣೆಗಾಗಿ ನೀಡಿದ್ದು, ಆಸಕ್ತರು ಮುಂದೆ ಬಂದರೆ ಉಳಿದ ಉದ್ಯಾನವನಗಳನ್ನು ನೀಡಲಾಗುವುದು ಎಂದರು. ಇದಕ್ಕೆ 8 ಗಂಟೆಗಳಿಗೆ ಒಬ್ಬರಂತೆ ವಾಚ್‍ಮನ್ ಹಾಗೂ ಅರ್ಧ ಎಕರೆಗೆ ಒಬ್ಬರಂತೆ ಕಾರ್ಮಿಕರನ್ನು ಸಂಸ್ಥೆಗಳು ನಿಯೋಜಿಸಬೇಕಾಗಿದೆ.

      ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೊಟ್ರೇಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಶಿವಪ್ರಕಾಶ್, ತಹಶೀಲ್ದಾರ್ ಸಂತೋಷ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap