ಹರಪನಹಳ್ಳಿ:
ಶಿಕ್ಷಣದಿಂದ ಸಮಾಜ ಪರಿವರ್ತನೆ ಆಗಲು ಸಾಧ್ಯ ಎಂದು ಹೊಸದುರ್ಗದ ಶ್ರೀಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಮೇಗಳ ಉಪ್ಪಾರಗೇರಿಯ ಉಪ್ಪಾರ ಸಮುದಾಯಭವನದಲ್ಲಿ ಹರಪನಹಳ್ಳಿ ತಾಲ್ಲೂಕು ಉಪ್ಪಾರ ನೌಕರರ ಸಂಘ ಹಾಗೂ ಹರಪನಹಳ್ಳಿ ತಾಲ್ಲೂಕು ಉಪ್ಪಾರ ಯುವ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಡ್ತಿ ಹೊಂದಿದ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲ ಸಂಘಟನೆಗಳು ಸೇರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮಠದಲ್ಲಿ ವರ್ಷದ 12 ತಿಂಗಳು ರಾಜ್ಯದ ಪ್ರತಿ ತಾಲ್ಲೂಕುನಿಂದ ಬಂದ ಸಮಾಜದವರಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಮಾಜದ ಕಾರ್ಯಗಳಿಗೆ ರಾಜಕೀಯ ಲೇಪನ ಮಾಡದೇ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.
ಭಗೀರಥ ಪೀಠದ ಅಭಿವೃದ್ಧಿ ಕೆಲಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಐದು ಕೋಟಿ ಅನುದಾನ ಬಿಡುಗಡೆ ಆಗಿದೆ. ಅದರಲ್ಲಿ ತಾಲ್ಲೂಕು ಶಾಖೆಗಳಿಗಳಿಗೆ ಪೀಠದಿಂದ 10 ಲಕ್ಷ ಅನುದಾನ ನೀಡಲಾಗಿದೆ. ಹರಪನಹಳ್ಳಿ ಸಮಾಜ ಬಾಂಧವರು ಸಮಾಜಾಭಿವೃದ್ಧಿಗೆ ಬಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಚಂದ್ರಪ್ಪ, `ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಉಪ್ಪಾರ ಸಮಜ ಹಿಂದುಳಿದಿದೆ. ಅಭಿವೃದ್ಧಿಗೆ ಸಮಾಜದ ಗಣ್ಯವ್ಯಕ್ತಿಗಳು, ಮತ್ತು ನೌಕರರು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಉಪ್ಪಾರ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯ ನೀಡಲು ಬದ್ಧರಾಗಿದ್ದೇವೆ’ ಎಂದರು.
ಎ.ಎಸ್.ಐ. ಪರುಶುರಾಮ ಮಾತನಾಡಿ, ಇಂದಿನ ಯುವ ಪೀಳಿಗೆ ಬರಿ ಮೊಬೈಲ್, ಟಿವಿ, ಕಂಪೂಟ್ಯರ್ಗಳಲ್ಲಿ ಕಾಲಹರಣ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳಗಲು ಪೋಷಕರೇ ಕಾರಣವಾಗುತ್ತಿರುವುದು ಬೇಸರದ ಸಂಗತಿ. ಮಕ್ಕಳ ಅಭಿರುಚಿಗೆ ತಕ್ಕ ಶಿಕ್ಷಣ ನೀಡಿದರೆ ಅವರು ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ತಾಲ್ಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಟಿ.ಚನ್ನಪ್ಪ, ಉಪನ್ಯಾಸಕ ಎ.ಮಂಜುನಾಥ, ಮುಖ್ಯಶಿಕ್ಷಕ ಯು.ಶೇಖರಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ, ನಿವೃತ್ತ ಮುಖ್ಯ ಶಿಕ್ಷಕ ಭೀಮಪ್ಪ ಮಾತನಾಡಿದರು.
ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಹನುಮಂತಪ್ಪ, ಯುವ ಘಟಕದ ಅಧ್ಯಕ್ಷ ಎಸ್.ರಾಜೇಂದ್ರ, ಶಿಕ್ಷಕರಾದ ಜೆ.ಎಸ್. ತಿಪ್ಪೆಸ್ವಾಮಿ, ನಿವೃತ್ತ ಶಿಕ್ಷಕ ಗುಡಿಹಾಲಪ್ಪ, ಶಿಕ್ಷಕರಾದ ಎಂ.ಸುಭದ್ರಮ್ಮ, ಎಂ.ರಮೇಶ, ಎನ್.ಜಿ.ಲಕ್ಷೀದೇವಿ, ಮುಖಂಡರಾದ ವೈ.ಜಿ. ಚನ್ನಬಸಪ್ಪ, ಕೆ.ತಿಮ್ಮಪ್ಪ ಇತರರಿದ್ದರು.