ಹರಪನಹಳ್ಳಿ:
ರಾಜ್ಯ ಸರ್ಕಾರದ ಆದೇಶದಂತೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಮೆರವಣಿಗೆ, ಬೈಕ್ ರ್ಯಾಲಿಗಳಿಗೆ ಅವಕಾಶವಿರುವುದಿಲ್ಲ ಎಂದು ತಹಶೀಲ್ದಾರ ಶಿವಶಂಕರ ನಾಯ್ಕ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ತ ತಾಲ್ಲೂಕು ಆಡಳಿತ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಜುಮನ್ ಅಧ್ಯಕ್ಷ ಸಿ.ಜಾವೇದ್ ಮಾತನಾಡಿ, `ಎಲ್ಲ ಜಯಂತಿ ಕಾರ್ಯಕ್ರಮಗಳ ಮುನ್ನ ಮೆರವಣಿಗೆ, ಬೈಕ್ ರ್ಯಾಲಿ ನಡೆಸಲಾಗುತ್ತದೆ. ದೇಶದ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ ಟಿಪ್ಪು ಅವರ ಜಯಂತಿ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
`ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮೆರವಣಿಗೆ ಹಾಗೂ ಬೈಕ್ ರ್ಯಾಲಿಗಳಿಗೆ ಅವಕಾಶ ನಿರಾಕರಿಸಿದೆ. ಜೊತೆಗೆ ಸಮಾಜದ ವತಿಯಿಂದಲೂ ನಡೆಸಲು ಅವಕಾಶ ನೀಡಲಾಗಿಲ್ಲ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ’ ಎಂದು ತಹಶೀಲ್ದಾರ ತಿಳಿಸಿದರು.
`ದಾರ್ಶಿನಿಕರ, ಸೂಫಿ-ಸಂತರ ಜಯಂತಿಗಳಂತೆ ಟಿಪ್ಪು ಜಯಂತಿಯಲ್ಲಿ ಕೂಡ ವಿಶೇಷ ಉಪನ್ಯಾಸ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ಉದ್ದೇಶಿಸಲಾಗಿದೆ. ಮಾನ್ಯರ ಜಯಂತಿ ಆಚರಿಸುವುದು ಒಂದು ಜಾತಿಗೆ ಸೀಮಿತವಾದದ್ದು ಅಲ್ಲ. ಅವರ ಆದರ್ಶಗಳನ್ನು ನಾಡಿಗೆ ಮತ್ತು ಯುವ ಪಿಳಿಗೆಗೆ ತಿಳಿ ಹೇಳುವುದು ಆಗಿದೆ’ ತಹಶೀಲ್ದಾರರು ಹೇಳಿದರು.
ಡಿ.ವೈ.ಎಸ್.ಪಿ. ನಾಗೇಶ್ ಐತಾಳ್ ಮಾತನಾಡಿ, `ಟಿಪ್ಪು ಜಯಂತಿ ಹೊರತುಪಡಿಸಿ ಉಳಿದ ಯಾವ ಜಯಂತಿಗಳಿಗೂ ಆಕ್ಷೇಪಗಳು ಬಂದಿಲ್ಲ. ಹೀಗಾಗಿ ಸರ್ಕಾರ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೆರವಣಿಗೆ ಹಾಗೂ ರ್ಯಾಲಿಗಳಿಗೆ ಅವಕಾಶ ನೀಡಿಲ್ಲ. ಜಯಂತಿ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಿ’ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ಮೆಹಬೂಬ್ ಸಾಬ್, ಪ್ರಭಾರಿ ಇಒ ತಿಮ್ಮಾನಾಯ್ಕ, ಬಿಸಿಎಂ ವಿಸ್ತೀರ್ಣಾಧಿಕಾರಿ ಚಂದ್ರಪ್ಪ, ಉಪನ್ಯಾಸಕ ತುಂಬಪ್ಪ, ಶಿಕ್ಷಣ ಇಲಾಖೆಯ ಜಯಮಾಲತೇಶ್, ಸಿಪಿಐ ಮುಖಂಡ ಗುಡಿಹಳ್ಳಿ ಹಾಲೇಶ್, ಮುಸ್ಲಿಂ ಸಮಾಜದ ಮುಖಂಡರಾದ ಖಾಸಿಂಸಾಬ್, ಮಜೀದ್, ಮಾಬೂಬ್ ಬಾಷಾ, ಅಮೀರ್, ಎಂ.ಖಾಸಿಂಸಾಬ್ ಇತರರಿದ್ದರು.