ಮಧುಗಿರಿ
ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಆಟೋಗಳ ನಿಲುಗಡೆಯಿಂದಾಗಿ ದಿನೆ ದಿನೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಶಾಲಾ ಮಕ್ಕಳು, ಪಾದಚಾರಿಗಳು, ಬಸ್ ಪ್ರಯಾಣಿಕರಿಗೆ ತೊಂದರೆ ಅನುಭವಿಸುವಂತಹ ವಾತಾವರಣ ಸೃಷ್ಟಿಯಾಗಿದೆ.ಪಟ್ಟಣದ ನೃಪತುಂಗ ವೃತ್ತ, ಟಿವಿವಿ ಪೆಟ್ರೋಲ್ ಬಂಕ್ ವೃತ್ತ ಹಾಗೂ ತುಮಕೂರು ಗೇಟ್ ಸಮೀಪ ಟ್ರಾಫಿಕ್ ಸಮಸ್ಯೆ ತಲೆದೋರಿದ್ದು, ಪ್ರತಿ ನಿತ್ಯ ಶಿರಾ, ಗೌರಿಬಿದನೂರು, ಹಿಂದೂಪುರ, ಸಿರಾ, ತುಮಕೂರಿಗೆ ತೆರಳುವ ಸಾರ್ವಜನಿಕರಿಗೆ ಆಟೋಗಳ ನಿಲುಗಡೆಯಿಂದಾಗಿ ಬಹಳ ತೊಂದರೆ ಉಂಟಾಗುತ್ತಿದೆ.
ಪೆಟ್ರೋಲ್ ಬಂಕ್ ಬಳಿಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಹಾಗೂ ಭಾರಿ ವಾಹನಗಳು ರಸ್ತೆಯಲ್ಲಿ ಓಡಾಡುವುದರಿಂದ ಶಾಲಾ ಮಕ್ಕಳಿಗೆ ಬಹಳ ಕಿರಿ ಕಿರಿಯಾಗಿ ರಸ್ತೆ ದಾಟುವುದೆ ಬಹಳ ಕಷ್ಟಕರವಾಗಿದೆ. ಆಟೋಚಾಲಕರಿಗೆ ಪ್ರತ್ಯೇಕವಾದ ನಿಲುಗಡೆಯ ವ್ಯವಸ್ಥೆ ಇದ್ದರೂ ಸಹ ರಾಘವೇಂಧ್ರ ಸ್ವಾಮಿ ದೇವಾಲಯ ಹಾಗೂ ಗುರು ಸನ್ನಿಧಿಯ ಹೋಟೆಲ್ಗಳ ಬಳಿಯ ರಸ್ತೆಯಲ್ಲಿ ಬೆಳಗಿನಿಂದ ಸಂಜೆವರೆವಿಗೂ ಎರಡೂ ಕಡೆ ಆಟೋಗಳನ್ನು ನಿಲ್ಲಿಸುತ್ತಾ ಪಾದಚಾರಿಗಳ ಮಾರ್ಗವೆ ಇಲ್ಲದಂತಾಗಿ ಬಸ್ ಪ್ರಯಾಣಿಕರಿಗೆ ಅನನುಕೂಲ ಉಂಟಾಗಿದೆ.
ಮುಖ್ಯ ರಸ್ತೆಯಲ್ಲಿ ಎರಡೂ ಕಡೆ ಆಟೋಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹೋಟೆಲ್ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವೆ ಆಗಾಗ ಜಗಳಗಳು ಸಹ ನಡೆದಿವೆ. ಪ್ರತಿ ನಿತ್ಯ ಎಂಜಿಎಂ ಶಾಲೆ, ಪುರಸಭೆ, ಡಿಸಿಸಿ ಬ್ಯಾಂಕ್, ವೈಶ್ಯ ಬ್ಯಾಂಕ್, ಪೋಸ್ಟ್ ಆಫೀಸ್, ಪೆಟ್ರೋಲ್ ಬಂಕ್, ಹನಿಮಾರ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತಿತರರ ಕಚೇರಿಗಳಿಗೆ ತೆರಳುವ ನಾಗರಿಕರಿಗೆ ತೊಂದರೆ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸುಗಮ ವಾಹನ ಸಂಚಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ