ಬೆಂಗಳೂರು
ಮಹಿಳೆಯರ ಸಿದ್ಧ ಉಡುಪು ಕಾರ್ಖಾನೆಯಲ್ಲಿ 27 ಲಕ್ಷ ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿ ಕೇವಲ 6 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದ ಅದೇ ಖಾರ್ಖಾನೆಯ ಉಪಾಧ್ಯಕ್ಷನನ್ನು ದೊಡ್ಡಬಳ್ಳಾಪುರ ಪೊಲೀಸರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಪಿನಗರದ ಜಂಬೂಸವಾರಿ ದಿಣ್ಣೆಯ ರವಿಕುಮಾರ್ (42) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಕಳವು ಮಾಡಿ ಕೇವಲ 6 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ 27 ಲಕ್ಷ 54 ಸಾವಿರ ಮೌಲ್ಯದ ಸಿದ್ಧ ಉಡುಪುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೊಡ್ಡಬಳ್ಳಾಪುರದ ಸಾನ್ವಿ ಇಂಡಸ್ಟ್ರೀಸ್ ಮಹಿಳಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕಳೆದ 8 ತಿಂಗಳಿನಿಂದ ಉಪಾಧ್ಯಕ್ಷನಾಗಿ ಕೆಲಸ ಮಾಡಿಕೊಂಡಿದ್ದ ರವಿಕುಮಾರ್ ಹಣದಾಸೆಗಾಗಿ ಕಳೆದ ಮಾ. 15 ರಂದು ಕಾರ್ಖಾನೆಯ ಇಬ್ಬರೂ ಕಾರ್ಮಿಕರೊಂದಿಗೆ ಶಾಮೀಲಾಗಿ ಸಿಸಿಟಿವಿ ಕ್ಯಾಮರಾಗಳ ಸ್ವಿಚ್ ಆಫ್ ಮಾಡಿಸಿ ಕಾರ್ಖಾನೆಯೊಳಗೆ ವಾಹನವನ್ನು ತಂದು 70 ಬಾಕ್ಸ್ಗಳಲ್ಲಿ ಇದ್ದ ಸಿದ್ಧ ಉಡುಪುಗಳನ್ನು ದೋಚಿ ಪರಾರಿಯಾಗಿದ್ದ.
ಅವುಗಳನ್ನು ದೊಡ್ಡಬಳ್ಳಾಪುರದ ಟಿಬಿ ವೃತ್ತದ ಮುತ್ತು ಕುಮಾರ ಸ್ವಾಮಿ ಎಂಬುವರ ಅಂಗಡಿಗೆ 27 ಲಕ್ಷ 54ಸಾವಿರ ಮೌಲ್ಯದ ಉಡುಪುಗಳನ್ನು ಕೇವಲ 6 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದ.
ಕಾರ್ಖಾನೆಯಲ್ಲಿ ಪಂಜಾಬ್ನಿಂದ ವಾಪಾಸ್ಸಾಗಿದ್ದ ಸಿದ್ಧ ಉಡುಪುಗಳು ಬಾಕ್ಸ್ಗಳು ಕಳುವಾಗಿದ್ದ ಸಂಬಂಧ ಕಾರ್ಖಾನೆಯ ಆಡಳಿತಾಧಿಕಾರಿ ಕೃಷ್ಣಮೂರ್ತಿ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ದೊಡ್ಡಬಳ್ಳಾಪುರ ಪೆÇಲೀಸರು ಆರೋಪಿಯನ್ನು ಖಚಿತ ಮಾಹಿತಿ ಮೇಲೆ ಬಂಧಿಸಿದ್ದಾರೆ.
ತಮಿಳುನಾಡಿನ ಸಿಂಗನಲ್ಲೂರು ಮೂಲದ ರವಿಕುಮಾರ್ ಎಂಬಿಎ ಪದವೀಧರನಾಗಿದ್ದು ಕೆನಡಾ, ಸಿಂಗಪೂರ್, ಜಪಾನ್ ದೇಶಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ. ಬಂಧಿತ ಆರೋಪಿಯು ಹಣದಾಸೆಗಾಗಿ ಈ ಕೃತ್ಯ ನಡೆಸುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ. ರಾಮ್ ನಿವಾಸ್ ತಿಳಿಸಿದ್ದಾರೆ.