ಚಿತ್ರದುರ್ಗ:
ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಎದುರಾಳಿ ಬಿಜೆಪಿ.ಯನ್ನು ಮಣಿಸಿ ಕಾಂಗ್ರೆಸ್ನ ಉಗ್ರಪ್ಪ ಜಯಶಾಲಿಯಾಗಿರುವುದಕ್ಕೆ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು.
ವಿಜಯೋತ್ಸವದ ಮುಂದಾಳತ್ವ ವಹಿಸಿದ್ದ ಆರ್.ಕೆ.ಸರ್ದಾರ್ ಮಾತನಾಡಿ ಬಳ್ಳಾರಿಯನ್ನೇ ಬಿಜೆಪಿ.ಯ ಭದ್ರಕೋಟೆಯನ್ನಾಗಿಸಿಕೊಂಡಿದ್ದ ಮೊಳಕಾಲ್ಮುರು ಶಾಸಕ ಶ್ರೀರಾಮುಲುರವರಿಗೆ ಉಪಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದ್ದು, ಅಲ್ಲಿನ ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್ನ ಉಗ್ರಪ್ಪನವರನ್ನು ಜಯಶಾಲಿಯನ್ನಾಗಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ.ಗೆ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ವರಿಷ್ಟರು ಸವಾಲಾಗಿ ಸ್ವೀಕರಿಸಿದ್ದರಿಂದ ಕಾಂಗ್ರೆಸ್ನ ಉಗ್ರಪ್ಪನವರಿಗೆ ಗೆಲುವಿನ ಹಾದಿ ಸುಗಮವಾಗಿ ಸದಾ ಎದೆಯುಬ್ಬಿಸಿ ಬೀಗುತ್ತಿದ್ದ ಬಿಜೆಪಿ.ಗೆ ಬಳ್ಳಾರಿ ಕ್ಷೇತ್ರದ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ.ಯ ಕೋಮುವಾದ ಹಾಗೂ ಬಳ್ಳಾರಿಯಲ್ಲಿ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿರವರ ತೊಘಲಕ್ ದರ್ಬಾರ್ಗೆ ಬೇಸತ್ತ ಜನ ಕಾಂಗ್ರೆಸ್ನ ಉಗ್ರಪ್ಪನನ್ನು ಗೆಲ್ಲಿಸಿದ್ದಾರೆ. ಅದೇ ರೀತಿ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ನ ಸಿದ್ದುನ್ಯಾಮೇಗೌಡಗೆ ಜಯದ ಮಾಲೆ ಒಲಿದಿದೆ. ಮಿತ್ರ ಪಕ್ಷವಾದ ಜೆಡಿಎಸ್.ಮಂಡ್ಯ, ರಾಮನಗರ ಉಪಚುನಾವಣೆಯಲ್ಲಿ ಜಯದ ನಗೆ ಬೀರಿರುವುದು ಸಮ್ಮಿಶ್ರ ಸರ್ಕಾರಕ್ಕೆ ಬಲ ಬಂದಂತಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ವಿಭಾಗದ ಜಿಲ್ಲಾಧ್ಯಕ್ಷ ಡಿ.ರಾಜಪ್ಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್ತಾಹೀರ್, ಮೆಹಬೂಬ್ಖಾನ್ ಸೇರಿದಂತೆ ಅನೇಕ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಭುತ್ವದ ಗೆಲುವು;
ಬಳ್ಳಾರಿ ಲೋಕಸಭಾ ಹಾಗೂ ಜಮಖಂಡಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ, ಸಿದ್ದುನ್ಯಾಮೇಗೌಡ ಇವರುಗಳು ಜಯಶಾಲಿಯಾಗಿರುವುದು ಪಕ್ಷದ ತತ್ವ ಸಿದ್ದಾಂತಗಳಿಗೆ ಸಿಕ್ಕ ನಿಜವಾದ ಜಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ವಕ್ತಾರ ಆರ್.ಶೇಷಣ್ಣಕುಮಾರ್ ಇವರುಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಎಂದರೆ ಬಿಜೆಪಿ. ಬಿಜೆಪಿ. ಎಂದರೆ ಬಳ್ಳಾರಿ ಎಂದು ಗರ್ವದಿಂದ ಭೀಗುತ್ತಿದ್ದ ಮೊಳಕಾಲ್ಮುರು ಶಾಸಕ ಶ್ರೀರಾಮುಲು ಮತ್ತಿತರರಿಗೆ ಈ ಸೋಲಿನಿಂದ ಮುಖಭಂಗವಾಗಿದೆ. ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪನವರ ಗೆಲುವಿಗೆ ಟೊಂಕ ಕಟ್ಟಿ ನಿಂತು ಶ್ರಮಿಸಿದ ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ದಿನೇಶ್ಗುಂಡುರಾವ್, ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಸಚಿವರುಗಳಾದ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ಪಕ್ಷದ ಎಲ್ಲಾ ಮುಖಂಡರುಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಇನ್ನು ಅನೇಕರು ಅಭಿನಂದಿಸಿದ್ದಾರೆ.