ಬೆಂಗಳೂರು:
ಶಿಲ್ಪ ಕಲೆಗೆ ಹೆಸರಾದ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಅಭಿವೃದ್ದಿಗೆ ಪೂರಕವಾಗುವಂತೆ ಹಾಗೂ ಶಿಲ್ಪಿಗಳ ಅನುಕೂಲಕ್ಕೆ ಬೇಕಾಗುವ ಪ್ರಸ್ತಾವನೆಯೊಂದನ್ನು ಸೂಕ್ತ ರೂಪು-ರೇಷೆಯೊಂದಿಗೆ ಸಿದ್ದಪಡಿಸಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ನಡೆದ ಸಭೆಯಲ್ಲಿ ಅವರು, ಕಳೆದ ಹಲವು ದಿನಗಳ ಹಿಂದೆ ಜಿಲ್ಲಾ ಪ್ರವಾಸದ ಸಮಯದಲ್ಲಿ ಶಿವಾರಪಟ್ಟಣದ ಶಿಲ್ಪ ಕಲಾ ಸಹಕಾರ ಸಂಘ ಲಿಮಿಟೆಡ್ ಇವರು ಸಚಿವರಿಗೆ ಮನವಿಯೊಂದನ್ನು ಸಲ್ಲಿಸಿ, ಶಿವಾರಪಟ್ಟಣದ ಶಿಲ್ಪ ಕಲಾ ಅಭಿವೃದ್ದಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕತಿ, ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತದ ಉನ್ನತಾಧಿಕಾರಿಗಳ ಸಭೆಯೊಂದನ್ನು ಇಂದು ಸಚಿವರ ಕೊಠಡಿಯಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಶಿಲ್ಪಕಲೆ ಅತ್ಯಂತ ಪ್ರಾಚೀನವಾದ ಮತ್ತು ಮಹತ್ವದ ಕಲೆಗಳಲ್ಲಿ ಒಂದು ಕೋಲಾರ ಜಿಲ್ಲೆಯಲ್ಲಿ ಇಡೀ ಗ್ರಾಮವೇ ಶಿಲ್ಪ ಕಲೆಯನ್ನು ರೂಢಿಸಿಕೊಂಡು ಜೀವಿಸುತ್ತಿದೆ ಈ ಗ್ರಾಮವನ್ನು ಒಂದು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕು ಹಾಗೂ ಇಲ್ಲಿನ ಶಿಲ್ಪಿಗಳಿಗೆ ವೃತ್ತಿ ನೈಪುಣ್ಯತೆ ಮತ್ತು ಮಾರುಕಟ್ಟೆ ಒದಗಿಸುವ ಯೋಜನೆಯೊಂದನ್ನು ರೂಪಿಸಬೇಕಿದೆ ಎಂದರು.
ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಶಿವಾರಪಟ್ಟಣದ ಶಿಲ್ಪಕಲೆಗೆ ಪೂರಕವಾಗುವಂತೆ ಬೇಕಾಗಿರುವ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಶಿಲ್ಪ ಕಲಾ ಅಕಾಡೆಮಿ ವತಿಯಿಂದ ಸಾಧ್ಯವಾದಷ್ಟು ಹೆಚ್ಚು ಹೆಚ್ಚಾಗಿ ಕಾರ್ಯಾಗಾರ ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ