ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಗೆ ಬಳ್ಳಾರಿಯಲ್ಲಿ ಅದ್ಧೂರಿ ಸ್ವಾಗತ

ಬಳ್ಳಾರಿ

      ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಬಳ್ಳಾರಿಗೆ ಶನಿವಾರ ಪ್ರವೇಶಿಸಿತು.

       ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ನಗರಕ್ಕೆ ಪ್ರವೇಶಿಸುತ್ತಲೇ ಅದ್ಧೂರಿಯಾದ ಸ್ವಾಗತ ದೊರಕಿತು. ಅಧಿಕಾರಿಗಳು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತ್ಯಂತ ಅದ್ಧೂರಿಯಾದ ಸ್ವಾಗತವನ್ನು ಕೋರಿದರು. ಮಹಾತ್ಮಾಗಾಂಧೀಜಿ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ, ವೈಷ್ಣವಿ ಜನತೋ… ಸೇರಿದಂತೆ ವಿವಿಧ ಭಜನ್‍ಗಳನ್ನು ಹಾಡಿದರು. ಗಾಂಧೀಜಿ ಪರ ಜೈಘೋಷ ಹಾಕಿ ಸಂಭ್ರಮಿಸಿದರು.

       ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕುವುದರ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿ ಪರ ಜೈ ಘೋಷಗಳನ್ನು ಕೂಗುವುದರ ಮೂಲಕ ನೆರೆದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

         ಸ್ತಬ್ಧಚಿತ್ರದ ಎದುರುಗಡೆ ಮಹಾತ್ಮಾಗಾಂಧೀಜಿ ಅವರು ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಪ್ರತಿಮೆ, ಗಾಂಧೀಜಿ ಅವರು ದಂಡಿಸತ್ಯಾಗ್ರಹ ನಡೆಸಿರುವುದು ಮತ್ತು ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಹೆಜ್ಜೆ ಹಾಕಿರುವುದು,ಗಾಂಧೀಜಿ ಅವರ ಬಾಲ್ಯ ಜೀವನದಿಂದ ಹಿಡಿದು ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಿತವಾಗುವವೆಗಿನ ರೇಖಾ ಚಿತ್ರಗಳು ಹಾಗೂ ವೈವಿಧ್ಯಮಯ ಚಿತ್ರಗಳು ಸ್ತಬ್ಧಚಿತ್ರ ರಥಯಾತ್ರೆಯಲ್ಲಿವೆ. ಇದರ ಜೊತೆಗೆ ರಥಯಾತ್ರೆಯಲ್ಲಿ ಅಳವಡಿಸಲಾಗಿರುವ ಎಲ್‍ಇಡಿಯಲ್ಲಿ ಮಹಾತ್ಮರ ಸಂದೇಶಗಳು ಭಿತ್ತರವಾಗುತ್ತಿರುವುದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ರಥದಲ್ಲಿನ ಪ್ರಿಯವಾದ ಭಜನೆಗಳ ಸಂಗೀತವನ್ನು ನೆರೆದವರು ಆಲಿಸಿದರು

           ಸಂದರ್ಭದಲ್ಲಿ ಮಾತನಾಡಿದ ಡಿಸಿ ರಾಮ್ ಪ್ರಸಾತ್ ಅವರು, ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡೀ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗಳು ರಾಜ್ಯದಾದ್ಯಂತ ಸಂಚರಿಸುತ್ತಿವೆ. ಶಾಂತಿ ಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆಯು ಬಳ್ಳಾರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸಂಚರಿಸಿ ಬಳ್ಳಾರಿಗೆ ಇಂದು ಬಂದಿರುವುದು ಖುಷಿಯ ಸಂಗತಿ ಎಂದರು.

        ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಹಾತ್ಮರ ವಿಚಾರಧಾರೆಗಳು ಮತ್ತು ಅವರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ನೀಡಿದ ಡಿಸಿ ರಾಮ್ ಪ್ರಸಾತ್ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಥಯಾತ್ರೆಯನ್ನು ವೀಕ್ಷಿಸಬೇಕು ಎಂದರು.

         ಗಾಂಧೀಜಿ ಅವರ ಬಾಲ್ಯದ ಜೀವನದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗಿನ ಎಲ್ಲ ಸ್ತಬ್ಧಚಿತ್ರಗಳನ್ನು ಒಂದೊಂದಾಗಿ ವೀಕ್ಷಿಸಿದ ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು ಮತ್ತು ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷ್ ಆದರು.

        ಈ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಯ ಮೆರವಣಿಗೆಯು ಬಳ್ಳಾರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದಲ್ಲಿ ಮೂರುಗಂಟೆಗಳ ಕಾಲ ತಂಗಿದ್ದ ಈ ಸ್ತಬ್ಧಚಿತ್ರ ರಥಯಾತ್ರೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಾಂಧಿ ಅನುಯಾಯಿಗಳು,ಸಾರ್ವಜನಿಕರು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು.

        ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ತಹಸೀಲ್ದಾರ್‍ರಾದ ನಾಗರಾಜ, ವಿಶ್ವಜೀತ್ ಮೆಹತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಪದವಿ ಪೂರ್ವ ಬಾಲಕೀಯರ ಕಾಲೇಜು ಪ್ರಾಂಶುಪಾಲ ಮಹಾಲಿಂಗ ಗೌಡ ಸೇರಿದಂತೆ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap