ತುಮಕೂರು :
ತುಮಕೂರು ನಗರದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿ ಮಾದರಿ ನಗರವಾಗಿ ರೂಪಿಸುವುದು ಮತ್ತು ತಾವು ಆಯ್ಕೆಯಾಗಿರುವ 31ನೇ ವಾರ್ಡನ್ನು ಮಾದರಿ ವಾರ್ಡ್ ಆಗಿ ರೂಪಿಸಲು ಪ್ರಾಮಾಣಿಕವಾಗಿ ಶಕ್ತಿಮೀರಿ ಶ್ರಮಿಸುವುದಾಗಿ ನೂತನ ಕಾರ್ಪೋರೇಟರ್ ಹಾಗೂ ತುಮಕೂರು ನಗರ ಬಿ.ಜೆ.ಪಿ ಅಧ್ಯಕ್ಷರಾದ ಸಿ.ಎನ್.ರಮೇಶ್ ಅವರು ಸಂಕಲ್ಪಪೂರ್ವಕವಾಗಿ ತಿಳಿಸಿದರು.
ಅವರು ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದಿಂದ ತುಮಕೂರಿನ ಶ್ರೀ ಗಾಯತ್ರಿ ಸಭಾ ಭವನದಲ್ಲಿ ತಮಗೆ ನೀಡಿದ ಸನ್ಮಾನಕ್ಕೆ ವಂದಿಸುತ್ತಾ ತಮ್ಮ ಗೆಲುವಿಗೆ ಹೊಯ್ಸಳ ಕರ್ನಾಟಕ ಬಂಧುಗಳು, ವಿಪ್ರ ಬಂಧುಗಳೇ ಅಲ್ಲದೆ ಸಮಾಜದ ನಾನಾ ಜಾತಿ- ಕ್ಷೇತ್ರಗಳ ವ್ಯಕ್ತಿಗಳು ಶ್ರಮಿಸಿ ನೆರವಾಗಿದ್ದಾರೆ. ಆ ಎಲ್ಲರ ಋಣ ತೀರಿಸುವುದು ನನ್ನ ಕರ್ತವ್ಯವಾಗಿದೆ. ಪ್ರತಿನಿಧಿಯಾಗಿ ಸಹ ಮಾಡಬೇಕಾದ ಅನೇಕ ಕೆಲಸಗಳು ಇರುವುದರಿಂದ ನೂತನ ಕಾರ್ಪೋರೇಟರ್ಗಳ ಸಹಕಾರ ಪಡೆದು ನಗರದ ಪ್ರಗತಿಗಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಹೊಯ್ಸಳ ಕರ್ನಾಟಕ ಸಂಘಗಳ ರಾಜ್ಯ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶಮೂರ್ತಿ, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ಆರ್ಯನ್ ಹೈಸ್ಕೂಲ್ ಅಸೋಸಿಯೇಷನ್ ಉಪಾಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಆರ್ಯಭಾರತಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಕೆ.ಆರ್.ಅಶೋಕ್, ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅನಂತರಾಮಯ್ಯ, ಹಿರಿಯ ವಕೀಲ ಕೆ.ಎಸ್.ಜಗನ್ನಾಥ್, ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಕಾರ್ಯದರ್ಶಿ ಕೆ.ಹಿರಿಯಣ್ಣ, ಮುಖಂಡರಾದ ಬಿ.ಎಸ್.ಶ್ರೀನಿವಾಸಮೂರ್ತಿ ಮತ್ತಿತರ ಗಣ್ಯರು ಸಿ.ಎನ್.ರಮೇಶ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಹೆಬ್ಬೂರು ರಾಮಣ್ಣ ಫೌಂಡೇಶನ್ ಸಂಸ್ಥಾಪಕ ಹೆಚ್.ಎಸ್.ರಾಮಣ್ಣ ಅವರು ಸಿ.ಎನ್.ರಮೇಶ್ ಅವರನ್ನು ಅಭಿನಂದಿಸಿ ಜಿಲ್ಲೆಯ ವಿಪ್ರ ಮುತ್ಸದ್ಧಿಗಳಾಗಿದ್ದ ತಾಳಕೆರೆ ಸುಬ್ರಹ್ಮಣ್ಯಂ, ಎಂ.ವಿ.ರಾಮರಾವ್ ಮತ್ತು ಟಿ.ಪಿ.ಕೃಷ್ಣಪ್ಪ ಅವರುಗಳ ಮೇಲ್ಪಂಕ್ತಿಯನ್ನು ಅನುಸರಿಸಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಯಶೋವಂತರಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎನ್.ಸತ್ಯನಾರಾಯಣ ಮಾತನಾಡಿ ಅಜಾತಶತ್ರುವಿನಂತಿರುವ ಸಿ.ಎನ್.ರಮೇಶ್ ಅವರಿಂದ ಮಹತ್ಸಾಧನೆ ಖಂಡಿತ ಎಂದು ತಿಳಿಸಿದರು. ಶ್ರೀ ಶಾರದಾ ಶಂಕರ ಮಹಿಳಾ ಮಂಡಳಿಯ ಅಧ್ಯಕ್ಷೆ ಇಂದಿರಮ್ಮ ಸುಂದರರಾವ್, ಸಿರಿನಾಡು ವಿಪ್ರಸಂಘದ ಜಿಲ್ಲಾ ಅಧ್ಯಕ್ಷ ಎಂ.ಹೆಚ್.ಮಂಜುನಾಥ್ ಮತ್ತು ಹಲವು ಸಂಸ್ಥೆಗಳ ಮುಖ್ಯಸ್ಥರು ಸಿ.ಎನ್.ರಮೇಶ್ ಅವರನ್ನು ಸನ್ಮಾನಿಸಿದರು.ಪುರೋಹಿತರಾದ ಹೆಬ್ಬೂರು ಸತ್ಯನಾರಾಯಣ್ ಸ್ವಾಗತಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ರಾಘವೇಂದ್ರ ವಂದಿಸಿದರು. ವಿಪ್ರ ಯುವ ವೇದಿಕೆಯ ಹೆಚ್.ಹರೀಶ್ ಹಿರಿಯಣ್ಣ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಖಚಾಂಚಿ ಬಿ.ವಿ.ಕೃಷ್ಣಮೂರ್ತಿ, ಹಾಸನ ಹೊಯ್ಸಳ ಕರ್ನಾಟಕ ಸಂಘದ ಜಿ.ಅನಂತರಾಮು, ಎಂ.ಜೆ.ವೇಣುಗೋಪಾಲ್ ಸೇರಿದಂತೆ ನೂರಾರು ವಿಪ್ರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ