ಬೆಂಗಳೂರು
ವೇಗವಾಗಿ ಬಂದ ಕಾರು ಹರಿದು ಉರುಳಿಬಿದ್ದು ರಸ್ತೆ ದಾಟುತ್ತಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನೌಕರರೊಬ್ಬರು ಮೃತಪಟ್ಟು ಕಾರು ಚಾಲಕ ಗಾಯಗೊಂಡಿರುವ ದುರ್ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಸಿಂಗನಹಳ್ಳಿಯ ದಿನೇಶ್ (38)ಎಂದುಗುರುತಿಸಲಾಗಿದೆ. ಕಾರು ಚಾಲಕ ಬನ್ನೇರುಘಟ್ಟದ ತಿಮ್ಮೇಗೌಡ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ವಿಮಾನ ನಿಲ್ದಾಣದ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಗುರುವಾರ ರಾತ್ರಿ 8.30ರ ವೇಳೆ ಐವಿಸಿ ರಸ್ತೆಯ ಡಾಬಾ ಗೇಟ್ನ ತಿರುವಿನಲ್ಲಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಗಂಭೀರವಾಗಿ ಗಾಯಗೊಂಡ ದಿನೇಶ್, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕುಡುಕ ಸಾವು
ದೇವರಜೀವನಹಳ್ಳಿಯ ಕಾಲಬೈರಸಂದ್ರದಲ್ಲಿ ಮಂಜುನಾಥ್ (44) ಎಂಬುವರು ನೇಣುಬಿಗಿದು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಮಂಜುನಾಥ್, ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿದು ಮನೆಯವರೊಂದಿಗೆ ಜಗಳ ಮಾಡುತ್ತಿದ್ದರು.ಕುಡಿತಕ್ಕೆ ಹಣವಿಲ್ಲದೆ ಮನೆಯವರೊಂದಿಗೆ ಜಗಳವಾಡಿ ರಾತ್ರಿ 11.30ರ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿಜೆ ಹಳ್ಳಿ ಪೆಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ