ಮಧುಗಿರಿ
ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಇಂದು ಸೊರಗುತ್ತಿದ್ದಾರೆ. ವ್ಯವಸಾಯದಿಂದ ಯಾವುದೇ ಲಾಭವಿಲ್ಲದಂತಾಗಿದೆ. ಇಂತಹ ಸಮಯದಲ್ಲಿ ಕೃಷಿಯ ಜೊತೆಗೆ ಉಪ ಕಸಬುಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿನ ಸಾಮಥ್ರ್ಯ ಸೌಧದಲ್ಲಿ ಶನಿವಾರ ಅವರು ಪಶು ಇಲಾಖೆಯ ವತಿಯಿಂದ ಆಯೋಜಿಸಿದ್ದ ಜಂತು ನಾಶಕ ಔಷಧಿ ವಿತರಣಾ ಕಾರ್ಯಕ್ರಮವನ್ನು ಕುರಿಮರಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರೈತರನ್ನು ಕುರಿ, ಮೇಕೆಗಳು ಹಾಗೂ ಪಶು ಭಾಗ್ಯ ಯೋಜನೆಗಳು ನಿಮ್ಮ ಕೈಹಿಡಿಯಲಿವೆ. ಇಲಾಖೆಯ ವತಿಯಿಂದ ದೊರಕುವ ಸವಲತ್ತುಗಳನ್ನು ಉಪಯೋಗಿಸಿ ಕೊಳ್ಳಬೇಕಾಗಿದೆ.
ಜೊತೆಗೆ ಸರಕಾರವು ನಿಮ್ಮ ಹಿತಕಾಯುವ ಉದ್ದೇಶದಿಂದಾಗಿ ಹಲವು ಬ್ಯಾಂಕುಗಳು ಕೈ ಜೋಡಿಸಿವೆ. ಸರಕಾರದ ಯೋಜನೆಗಳನ್ನು ಬಿಟ್ಟರೆ ಮಧುಗಿರಿ ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಯಾವುದೆ ಸಂಪನ್ಮೂಲಗಳಿಲ್ಲ. ಈ ಬಗ್ಗೆ ಸರಕಾರದ ಗಮನ ಸೆಳೆದಿರುವುದಾಗಿ ತಿಳಿಸಿದರು.
ನಮ್ಮ ತಾಲ್ಲೂಕಿನಲ್ಲಿ ಮೂರು ನದಿಗಳಿದ್ದು, ಅವುಗಳಿಗೆ ಚೆಕ್ ಡ್ಯಾಂ ಗಳನ್ನು ನಿರ್ಮಿಸಿದರೆ, ಅಂರ್ತಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಿಗೆ ನೀರು ದೊರೆಯಲಿದೆ. ವೈಜ್ಞಾನಿಕ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗ ಬೇಕಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಹಿಂಗಾರು ಮಳೆ ಬರುವ ವಾತಾವರಣವಿದ್ದು ಕರೆ ಕಟ್ಟೆಗಳಿಗೆ ನೀರು ಹರಿದರೆ ಜನ ಜಾನುವಾರುಗಳಿಗೆ ಅನೂಕೂಲವಾಗಲಿದೆ ಎಂದರು.
ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಗೋ.ಮ. ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 1 ಲಕ್ಷ 23 ಸಾವಿರ ಕುರಿ, ಮೇಕೆಗಳಿದ್ದು ಅವುಗಳಿಗೆ ಡಿ.1 ರಿಂದ ಡಿ.15 ರವರೆವಿಗೆ ಜಂತು ನಾಶಕ ಔಷಧಿಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿಯೇ 13 ಲಕ್ಷ ಕುರಿ ಹಾಗೂ 7 ಲಕ್ಷ ಮೇಕೆಗಳಿದ್ದು, ಕುರಿ ಮತ್ತು ಉಣ್ಣೆ ಸಹಕಾರ ಸಂಘಗಳು ತಾಲ್ಲೂಕಿನಲ್ಲಿ ಕೇವಲ ಮೂರು ಇವೆ.
200 ರಿಂದ 300 ಕುರಿಗಾಹಿಗಳು ಸೇರಿದರೆ ಇನ್ನಷ್ಟು ಸಹಕಾರಿ ಸ್ಥಾಪಿಸಿದರೆ ಇಲಾಖೆಯ ವತಿಯಿಂದ ಅನುಕೂಲ ಮಾಡಿಕೊಡಲಾಗುವುದು . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸಂಚಾರಿ ಮಾಂಸ ಮಾರಾಟ ಮಾಡಲು 11 ಲಕ್ಷ ರೂ.ಗಳನ್ನು ನೀಡಲಾಗುವುದು. ಇಡೀ ದೇಶದಲ್ಲಿಯೇ ಕುರಿ ಮೇಕೆಗಳು ಆಕಸ್ಮಿಕವಾಗಿ ಮೃತಪಟ್ಟರೆ ಸಂಬಂಧಿಸಿದ ರೈತರಿಗೆ ಸಹಾಯ ಧನ ವಿತರಿಸಲಾಗುತ್ತಿರುವ ಯೋಜನೆ ನಮ್ಮ ರಾಜ್ಯದಲ್ಲಿ ಮಾತ್ರ ಚಾಲ್ತಿಯಲ್ಲಿದೆ ಎಂದರು.
ವೈದ್ಯರುಗಳಾದ ಅಶ್ವತ್ಥನಾರಾಯಣ್, ಗಿರೀಶ್ ಬಾಬು ರೆಡ್ಡಿ, ಸಿದ್ದನಗೌಡ, ಜಗದೀಶ್, ಶಂಕರ್ ಪಾಟೀಲ್, ಮಂಜುನಾಥ್, ಶ್ರೀನಿವಾಸ್ ಕುಜ, ಕಾವ್ಯ, ಯೋಗಾನಂದ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ, ತಾಪಂ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ತುಂಗೋಟಿ ರಾಮಣ್ಣ, ಶಫೀಕ್ ಅಹಮದ್, ಮಂಜುನಾಥ್, ಚಿಕ್ಕಣ್ಣ, ಎಂ.ಕೆ.ಮಂಜುನಾಥ್ ಹಾಗೂ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ