ಹೊಸಪೇಟೆ:
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ. ರಫೀಕ್ ಹಾಗೂ ತಾಲೂಕಿನ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಮಾಜಿ ಹೇಮಣ್ಣಾ ರವರು ಭಾನುವಾರ ಅಧಿಕಾರ ಸ್ವೀಕರಿಸಿದರು.
ಸ್ಥಳೀಯ ಪಟೇಲ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಪಕ್ಷದ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರು ಧ್ವಜ ನೀಡಿ, ಜವಾಬ್ದಾರಿ ವಹಿಸಿದರು.
ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಮಾತನಾಡಿ, ಲೋಕಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣೆಗೆ ಕೆಲವೇ ದಿನಗಳು ಉಳಿದಿವೆ. ಪಕ್ಷವನ್ನು ಕೆಳಹಂತದಿಂದ ಸಂಘಟಿಸುವ ಕೆಲಸ ಇನ್ನಷ್ಟು ಚುರುಕುಗೊಳ್ಳಬೇಕು. ನೂತನ ಅಧ್ಯಕ್ಷರು ಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರುಗಳು ಗಟ್ಟಿಯಾಗಿವೆ. ಅವುಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಹಳಬರು, ಹೊಸಬರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು. ಎಲ್ಲ ವರ್ಗದವರ ವಿಶ್ವಾಸ ಗಳಿಸಿ, ಪಕ್ಷವನ್ನು ಬೆಳೆಸಬೇಕು ಎಂದು ಸೂಚಿಸಿದರು.
ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫಹೀಮ್ ಬಾಷಾ, ಮುಖಂಡರಾದ ಗುಜ್ಜಲ್ ರಘು, ರತನ್ ಸಿಂಗ್, ತಾರಿಹಳ್ಳಿ ವೆಂಕಟೇಶ, ಸಿದ್ದನಗೌಡ ಪಾಟೀಲ, ವೀರಸ್ವಾಮಿ, ಅಯ್ಯಾಳಿ ತಿಮ್ಮಪ್ಪ, ತಮ್ಮೆನಳ್ಳೆಪ್ಪ, ಸಂದೀಪ್ ಸಿಂಗ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ನಾಗಲಕ್ಷ್ಮಿ, ತಾಲ್ಲೂಕು ಅಧ್ಯಕ್ಷೆ ಮುನ್ನಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ