ಬೆಂಗಳೂರು
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮತ್ತು ರೋಟರಿ ಕ್ಲಬ್ ಫೆ.4ರಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರ ಕಾಲೇಜು ಜಾನಪದ ನೃತ್ಯ, ಜಾನಪದ ಗೀತೆ ಸ್ಪರ್ಧೆ ಮತ್ತು ಜಾನಪದ ಝೇಂಕಾರ ಉತ್ಸವ ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಟೇಕಲ್, ಪಾಶ್ಚಾತ್ಯ ಪ್ರಭಾವದಿಂದ ಜಾನಪದ ಕಲೆ ನಶಿಸುತ್ತಿದೆ. ಆದ್ದರಿಂದ ಜಾನಪದಕ್ಕೊಂದು ಜೀವ ತುಂಬಲು ಹಾಗೂ ಅದರ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಫೆ.4ರಿಂದ ಮೂರು ದಿನಗಳವರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಫೆ.8ರಂದು ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
30 ಕಾಲೇಜಿನ 30 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಮೂಲ ಜಾನಪದಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಲ್ಲಿ ಚಲನಚಿತ್ರದಲ್ಲಿ ಅಳವಡಿಕೆಯಾಗಿರುವ ಮಿಶ್ರಿತ ಜಾನಪದ ಹಾಡುಗಳಿಗೆ ಅವಕಾಶವಿಲ್ಲ. ಅಂದಾಜು 600 ಯುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜಾನಪದ ವಸ್ತು ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದರು.
ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ ರೂ. ಹಾಗೂ ಜಾನಪದ ಗೀತೆಯಲ್ಲಿ ವಿಜೇತರಾದವರಿಗೆ 8 ಸಾವಿರ ರೂ. ಬಹುಮಾನ ನಿಗದಿ ಮಾಡಲಾಗಿದೆ. . ಎಲ್ ಎನ್ ಮುಕುಂದರಾಜ್, ಕೋಲಾರ ರಾಜಪ್ಪ, ವೇಮಗಲ್ ನಾರಾಯಣಸ್ವಾಮಿ ಹಾಗೂ ಸವಿತಾ ಚಿನಕುರಳಿ ಹಾಗೂ ವಿಶ್ವವಿದ್ಯಾಲಯದ ಅಧ್ಯಾಪಕರು ಸ್ಪರ್ಧೆಯ ಅಂತಿಮ ತೀರ್ಪುಗಾರರಾಗಿರುತ್ತಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.