ಮಂಡ್ಯ:
ಕನಗನಮರಡಿ 30 ಮಂದಿಯನ್ನು ಬಲಿ ಪಡೆದಿದ್ದ ಬಸ್ ದುರಂತ ನಡೆದ ಬೆನ್ನಲ್ಲೇ ಮತ್ತೊಂದು ಅವಘಡ ಸಂಭವಿಸಿದ್ದು, ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದುರ್ಘ ಟನೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಬಳಿ ನಡೆದಿದೆ.
ಘಟನೆಯಲ್ಲಿ ಒಂದೇ ಕುಟುಂಬದ ಅಜ್ಜಿ, ಮಗಳು ಹಾಗೂ ಮೊಮ್ಮಗಳು ವಿಧಿವಶರಾಗಿದ್ದು, ಲೋಕಸರ ಗ್ರಾಮದ ನಿವಾಸಿಗಳಾದ ನಾಗಮ್ಮ (50), ಅಂಬಿಕಾ (30), ಮಾನ್ಯತಾ (6) ಮೃತ ದುರ್ದೈವಿಗಳಾಗಿದ್ದಾರೆ.
ಘಟನೆ:
ನಾಗಮ್ಮ ಕುಟಂಬದ ಹಿರಿಯರಾಗಿದ್ದು, ಅವರ ಮಗಳು ಅಂಬಿಕಾ, ಮೊಮ್ಮಗಳು ಮಾನ್ಯತಾ ಇಂದು ದೇವಾಲಯಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಾಸಾಗುವ ವೇಳೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಮೂವರು ತುಂಬಿ ಹರಿಯುತ್ತಿದ್ದ ವಿಸಿ ನಾಲೆಯೊಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಮೂವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಬಾಲಕಿ ಮಾನ್ಯತಾ ಸ್ಥಳದಲ್ಲೇ ಸಾವನ್ನಪ್ಪಿದಳು. ಬಳಿಕ ತಾಯಿ ನಾಗಮ್ಮ ಹಾಗೂ ಅಂಬಿಕಾರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರು ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ನಾಲೆಯಲ್ಲಿ ನೀರು ತುಂಬಿದ್ದರಿಂದ ಹೊರಬರಲಾಗದೇ ಮೂವರ ದುರ್ಮರಣಕ್ಕೀಡಾಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ನ. 24 ರಂದು ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಬಸ್ ಉರುಳಿ 30 ಜನ ಜಲಸಮಾಧಿಯಾಗಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ