ದೆಹಲಿ:
ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಹೆಚ್ಚುತ್ತಲೇ ಇದ್ದು, ಇದಕ್ಕೆ ಜೈಪುರದ ಕೇಂದ್ರ ಕಾರಾಗೃಹದಲ್ಲಿ ಭಾರತೀಯ ಕೈದಿಗಳು ಅಮಾನುಷವಾಗಿ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ನಡೆದಿದೆ.
ಹೌದು, ಜೈಪುರದ ಕೇಂದ್ರ ಕಾರಾಗೃಹದಲ್ಲಿ ಇಂದು(ಬುಧವಾರ) ಪಾಕಿಸ್ತಾನ ಮೂಲದ ಕೈದಿಯನ್ನು ಸಹ ಕೈದಿಗಳು ಅಮಾನುಷವಾಗಿ ಬಡಿದು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರು ಭಾರತೀಯ ಕೈದಿಗಳು ಈ ಕೃತ್ಯವನ್ನೆಸಗಿದ್ದು ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯವನ್ನೆಸಗಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನೊಳಗೆ ಪಾಕ್ ಮೂಲದ ಕೈದಿಯನ್ನು ಕೊಂದಿರುವ ಘಟನೆಯನ್ನು ಜೈಪುರ್ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ರುಪಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಮೂವರು ಇತರ ಕೈದಿಗಳು ಶಾಮೀಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಿಮಿ ಉಗ್ರಗಾಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಸಂಘಟನೆಯ ಉಗ್ರನಾಗಿರುವ ಶಾಕೀರುಲ್ಲಾ ಅಲಿಯಾಸ್ ಮೊಹಮ್ಮದ್ ಹನೀಫ್ ಎಂಬಾತನನ್ನು ಸಹ ಕೈದಿಗಳು ಹತ್ಯೆಗೈದಿದ್ದಾರೆ. ಗೂಢಚಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಹನೀಫ್ ಗೆ ಕೋರ್ಟ್ ಜೈಲುಶಿಕ್ಷೆ ವಿಧಿಸಿತ್ತು ಎಂದು ವರದಿ ವಿವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ