ಬೆಂಗಳೂರು:
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ರಾಜ್ಯ ನಾಯಕರು ಭರ್ಜರಿ ಸ್ವಾಗತ ನೀಡಿದರು.
ಸ್ವಾಗತ ಸ್ವೀಕರಿಸಿದ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚುಟುಕು ಸಭೆಯಲ್ಲಿ ರಾಹುಲ್ ಗಾಂಧಿ ಅವರು ನಡೆಸುತ್ತಿದ್ದಾರೆ.
ಸಭೆ ಮುಗಿದ ಬಳಿಕ ಕೆಲವೇ ನಿಮಿಷಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕ ಎಚ್ಎಎಲ್ ನೌಕರರೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಇನ್ನು ಸಂವಾದದ ಆರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಹೆಚ್ಎಎಲ್ ಸಾಧಾರಣ ಸಂಸ್ಥೆಯಂತಲ್ಲ. ನೀವು ಮಾಡಿರುವ ಕೆಲಸ ಶ್ಲಾಘನೀಯವಾದುದು. ನಿಮ್ಮ ಮಾತುಗಳನ್ನ ಕೇಳಲು ನಾನು ಬಂದಿದ್ದೇನೆ. ನೀವು ಎದುರಿಸುತ್ತಿರುವ ಕಷ್ಟಗಳು, ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇನೆ ಎಂದು ನಿವೃತ್ತ ನೌಕರರಿಗೆ ಹೇಳಿದರು. ಇನ್ನು ನನಗೆ ಎಚ್ಎಎಲ್ ಕೇವಲ ಒಂದು ಸಂಸ್ಥೆಯಲ್ಲ. ಭಾರತ ಸ್ವಾತಂತ್ರ್ಯ ಬಂದ ನಂತರ ಕೆಲವು ಸಂಸ್ಥೆಗಳನ್ನು ಸ್ಥಾಪಿಸಿದೆ. ಐಐಟಿ ಶಿಕ್ಷಣಕ್ಕೆ ಮಾತ್ರ ಮೀಸಲಾಗಿದೆ. ಅದೇ ರೀತಿ ಎಚ್ಎಎಲ್ ಅನ್ನು ದೇಶ ರಕ್ಷಣೆ ಹಾಗೂ ವಿಮಾನ ಉತ್ಪಾದಿಸಲು ಸ್ಥಾಪಿಸಲಾಯಿತು ಎಂದರು. ನಾನು ನಿಮ್ಮ ಮಾತುಗಳನ್ನು ಕೇಳಲು ಬಂದಿದ್ದೇನೆ. ಈ ಸಂಸ್ಥೆ ಭವಿಷ್ಯದಲ್ಲಿ ಹೇಗೆ ನಡೆಯಬೇಕು ಎನ್ನುವುದನ್ನು ನಿಮ್ಮಿಂದ ತಿಳಿಯಲು ಬಯಸುತ್ತೇನೆ. ನಿಮ್ಮ ಸ್ಥಿತಿ ಈಗ ಹೇಗಿದೆ ಅಂತಾ ನನಗೆ ಗೊತ್ತಿದೆ. ಭವಿಷ್ಯದಲ್ಲಿ ಈ ಸಂಸ್ಥೆಯ ಅಭಿವೃದ್ಧಿಗೆ ಏನು ಮಾಡಬೇಕು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಾಗಿದೆ ಎಂದು ನೌಕರರ ಅಭಿಪ್ರಾಯ ಕೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್, ಜೈಪಾಲ್ ರೆಡ್ಡಿ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಕೆ ಶಿವಕುಮಾರ್, ಸಂಸದ ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ