ಬೆಳಗಾವಿ:
ಗೋಕಾಕ್ನ ಹಿರೇನಂದಿ ಗ್ರಾಮದ ಬಳಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು 22 ಜನರನ್ನು ಸಾಗಿಸುತ್ತಿದ್ದ ಗೂಡ್ಸ್ ಟಾಟಾ ಏಸ್ ವಾಹನದ ಮಧ್ಯೆ ಮಂಗಳವಾರ ಬೆಳಗಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಹಿಳೆಯರು ಸಾವಿಗೀಡಾಗಿದ್ದರೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು , ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಂಕೇಶ್ವರ- ನರಗುಂದ ರಾಜ್ಯ ಹೆದ್ದಾರಿಯ ತಾಲ್ಲೂಕಿನ ಚಿಕ್ಕನಂದ ಮತ್ತು ಹಿರೇನಂದಿ ಕ್ರಾಸ್ ಬಳಿಯ ಸಹ್ಯಾದ್ರಿ ದಾಭಾ ಬಳಿ ಅಪಘಾತ ಸಂಭವಿಸಿದೆ.
ಮೃತ ಮಹಿಳೆಯರೆಲ್ಲರೂ ಸವದತ್ತಿ ತಾಲ್ಲೂಕಿನ ಯರಗಣ್ವಿ ಮತ್ತು ಮಾಡಮಗೇರಿ ಗ್ರಾಮದ ನಿವಾಸಿಗಳಾಗಿದ್ದರು. ಗಂಗವ್ವ ಸಿದ್ದಪ್ಪ ಹುರಳಿ (30), ಯಲ್ಲವ್ವ ಬಾಲಪ್ಪ ಪೂಜೇರಿ (45), ಯಲ್ಲವ್ವ ಮಾರುತಿ ಗುಂಡಪ್ಪನವರ (40), ರೇಣುಕಾ ಫಕೀರಪ್ಪ ಸೊಪ್ಪಡ್ಲ (35), ಕಾಶವ್ವ ಶಿವಪ್ಪ ಖಂಡ್ರಿ (70) ಮತ್ತು ಪಾರವ್ವಾ ಕಲ್ಲಪ್ಪ ಖಂಡ್ರಿ ಅಸುನೀಗಿದವರು.
ಸೋಮವಾರ ರಾತ್ರಿ ಗೋಕಾಕ-ಫಾಲ್ಸ್’ನಲ್ಲಿ ನಡೆದ ದೂರದ ಸಂಬಂಧಿಯೊಬ್ಬರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ