ಬೆಂಗಳೂರು:
ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅಕಸ್ಮಾತ್ ಕುಡಿದು ವಾಹನ ಚಾಲನೆ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ರಾತ್ರಿಯಿಡೀ ಕಲ್ಯಾಣ ಮಂಟಪದಲ್ಲಿ ಮಲಗುವ ದುರ್ಗತಿ ಎದುರಾಗಲಿದೆ.
ಹೌದು, ಕುಡಿದು ಗಾಡಿ ಓಡಿಸುವಾಗ ಸಿಕ್ಕಿ ಬಿದ್ದರೆ ಅಂತವರನ್ನು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅವರು ರಾತ್ರಿಯಿಡೀ ಅಲ್ಲಿಯೇ ಕಾಲಕಳೆಯಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ 8 ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲಾಗಿದ್ದು, ಇಂತದ್ದೊಂದು ಹೊಸ ಯೋಜನೆಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಮಾತ್ರವಲ್ಲದೆ ಚರ್ಚ್ಸ್ಟ್ರೀಟ್, ಇಂದಿರಾನಗರ, ಮಾರತ್ತಳ್ಳಿ, ಜಯನಗರ ಮತ್ತಿತರ ಕಡೆ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಲಿದ್ದಾರೆ. ಮಫ್ತಿಯಲ್ಲಿ ಸಾವಿರಾರು ಪೊಲೀಸರು ನಿಗಾ ವಹಿಸಲಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮಹಿಳಾ ಪೊಲೀಸರ ಮಫ್ತಿ :
ಯುವತಿಯರ ಮೈ ಮುಟ್ಟಿ ಕಿಡಿಗೇಡಿತನ ಪ್ರದರ್ಶಿಸಲು ಎಂಜಿ ರಸ್ತೆಗೆ ಬರುವವರು ಕೆಲವರ ಮೇಲೆ ನಿಗಾ ಇಡಲು ನೂರಾರು ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಮಫ್ತಿಯಲ್ಲೇ ಕಾರ್ಯನಿರ್ವಹಿಸಲಿದ್ದಾರೆ. ಕೈ ಸನ್ನೆ, ಕಣ್ಸನ್ನೆ ಮಾಡಿದರೆ ಲಾಠಿ ರುಚಿ ಜತೆಗೆ ಕೇಸ್ ಪಕ್ಕಾ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಇಡಲಾಗಿದ್ದು, ಪೊಲೀಸರು ನಿರಂತರವಾಗಿ ವೀಕ್ಷಣೆ ಮಾಡಲಿದ್ದಾರೆ.
ಸಿಸಿ ಕ್ಯಾಮೆರಾಗಳ ಕಣ್ಣು :
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಂತಹ ಪ್ರಮುಖ ರಸ್ತೆಗಳಲ್ಲದೆ ಈ ರಸ್ತೆಗಳಿಗೆ ಹೊಂದಿಕೊಂಡಿರುವ ರಸ್ತೆಗಳು, ಸಂಪರ್ಕ ಮಾರ್ಗಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
2500 ಪೊಲೀಸ್ ವಾಹನಗಳು :
ನಗರ ಕಮಿಷನರೇಟ್ನ ಸುಮಾರು 2500ಕ್ಕೂ ಹೆಚ್ಚು ವಾಹನಗಳು ಡಿ.31ರ ಸಂಜೆ 7 ಗಂಟೆಯಿಂದ ಜ.1ರ ಬೆಳಗಿನವರೆಗೂ ಕರ್ತವ್ಯದಲ್ಲಿರುತ್ತವೆ. 270 ಹೊಯ್ಸಳ, 1700 ಚೀತಾ ಮತ್ತು ಎಲ್ಲ ಪೊಲೀಸ್ ಜೀಪ್ಗಳು ರಾತ್ರಿ ಪಾಳಿ ಗಸ್ತು ನಡೆಸಲಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ಸವೀರ್ಸ್ ರಿವಾಲ್ವರ್ ಮತ್ತು ಬಂದೂಕುಗಳ ಜತೆಗೇ ಕರ್ತವ್ಯ ನಿರ್ವಹಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ