ಬೆಂಗಳೂರು
ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದಲ್ಲಿ ತಂದೆ_ತಾಯಿ ಪುತ್ರಿ ಮೊಮ್ಮಗು ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಹಣಕಾಸಿನ ವ್ಯವಹಾರದಿಂದ ಎನ್ನುವುದು ನಗರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಹಣಕಾಸು ವ್ಯವಹಾರ ನಡೆಸುತ್ತಿದ್ದ ಸುಧಾರಾಣಿ ಪುತ್ರಿ ಸೋನಿಕಾ(6)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೋಷಕರೊಂದಿಗೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಸುಧಾರಾಣಿಯು ನಿವೇಶನ ಖರೀದಿಗಾಗಿ 25 ಲಕ್ಷ ನೀಡಿದ್ದ ವ್ಯಕ್ತಿಯ ಕುಟುಂಬದವರ ಮಾಹಿತಿ ಪಡೆಯಲಾಗುತ್ತಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಸುಧಾರಾಣಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು ಈ ಬಗ್ಗೆ ಹಲವು ಬಾರಿ ಬುದ್ದಿ ಹೇಳಿದರೂ ಆಕೆಯು ವ್ಯವಹಾರವನ್ನು ನಿಲ್ಲಿಸಿರಲಿಲ್ಲ.ಪತ್ನಿಯ ವರ್ತನೆಯಿಂದ ಬೇಸತ್ತು ಪತಿ ಅರ್ಜುನ್ ಆಕೆಯ ವ್ಯವಹಾರಗಳಿಗೆ ತಲೆಹಾಕುವುದನ್ನು ಬಿಟ್ಟು ತಮ್ಮ ಪಾಡಿಗೆ ತಾವು ಮೆಡಿಕಲ್ ಸ್ಟೋರ್ ನಡೆಸಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ.
ನಾಲ್ವರ ಸಾವಿನಲ್ಲಿ ಅರ್ಜುನ್ ಪಾತ್ರವಿಲ್ಲದಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ಆಗಾಗ ತವರಿಗೆ ಹೋಗುತ್ತಿದ್ದರಿಂದ ಪತ್ನಿ ಮನೆಗೆ ಬರುವುದು ಒಂದು ದಿನ ತಡವಾಗಿದ್ದರೂ ಅರ್ಜುನ್ ತಲೆಕೆಡಿಸಿಕೊಂಡಿರಲಿಲ್ಲ ಕೃತ್ಯ ಪತ್ತೆಯಾದ ನಂತರವೇ ಅವರಿಗೂ ವಿಷಯ ತಿಳಿದಿದೆ ಎನ್ನುವುದು ವಿಚಾರಣೆಯಲ್ಲಿ ಗೊತ್ತಾಗಿದೆ.
ಸುಧಾರಾಣಿ ನಿವೇಶನ ಖರೀದಿಸಲು 25 ಲಕ್ಷ ಹಣ ನೀಡಿದ್ದ ವ್ಯಕ್ತಿಯು ಅಪಘಾತದಲ್ಲಿ ಮೃತಪಟ್ಟಿದ್ದು ಆತನ ಕುಟುಂಬದವರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಸುಧಾರಾಣಿ ಅವರು ಕೃತ್ಯಕ್ಕೂ ಮುನ್ನ ಬರೆದಿಟ್ಟಿರುವ ಡೆತ್ನೋಟ್ನಲ್ಲಿ ನಾನು ಸುಧಾರಾಣಿ.ನಮ್ಮ ಸಾವಿಗೆ ಬೇರೆ ಯಾರು ಕಾರಣ ಅಲ್ಲ ನಾನೇ ಕಾರಣ. ನನಗೆ ಒಂದು ಮನೆ ತೆಗೆದುಕೊಳ್ಳುವ ಕನಸು ಇತ್ತು. ಹೀಗಿರುವಾಗ ಒಬ್ಬನನ್ನು ನಂಬಿದ್ದೆ. ಅದೇ ನಂಬಿಕೆ ಮೇಲೆ ಆತನಿಗೆ 25 ಲಕ್ಷ ಹಣ ಕೊಟ್ಟಿದ್ದೆ. ಆದರೆ ಆ ವ್ಯಕ್ತಿ ಹಣ ತೆಗೆದುಕೊಂಡು ಹೋಗುತ್ತಿರುವಾಗಲೇ ಅಪಘಾತವಾಗಿ ಸಾವನ್ನಪ್ಪಿದ. ನನ್ ಹಣ ಹೋಯ್ತು. ಅಪ್ಪ ಅಮ್ಮನಿಗೆ ವಿಚಾರ ತಿಳಿಸಿದ್ದೆ. ನಂತರ ಹಣ ವಾಪಸ್ ಸಿಗಬಹುದು ಅಂತ ಸಾಕಷ್ಟು ಪ್ರಯತ್ನ ಪಟ್ಟೆ. ತುಂಬಾ ಜನರ ಬಳಿ ಕೇಳಿ ಕೊಂಡಿದ್ದೆ. ಆದರೆ ಪರಿಹಾರ ಸಿಗಲಿಲ್ಲ. ಹಣ ವಾಪಸ್ ಬರುತ್ತೆ ಎನ್ನುವ ನಂಬಿಕೆ ಬರಲಿಲ್ಲ.
ಕೊನೆಗೆ ಅಪ್ಪ-ಅಮ್ಮನ ಜೊತೆ ಮಾತನಾಡಿ ತೀರ್ಮಾನ ಮಾಡಿದ್ವಿ. ಅಪ್ಪ ಅಮ್ಮನಿಗೆ ಶನಿವಾರ ಮಾತ್ರೆ ಕೊಟ್ಟೆ, ಅವರು ಸಾಯುವ ಮೊದಲು ನಾವೇನಾದರು ಸತ್ತಿಲ್ಲಾ ಅಂದರೆ ನಮ್ಮನ್ನು ಕೊಂದುಬಿಡು ಎಂದು ಹೇಳಿದರು. ನಂತರ ಅಪ್ಪ-ಅಮ್ಮ ಮಾತ್ರೆ ಸೇವಿಸಿದ ನಂತರ ನಾನು ಮಗಳನ್ನು ಕರೆದುಕೊಂಡು ಮನೆ ಬೀಗ ಹಾಕಿಕೊಂಡು ಗಂಡನ ಮನೆಗೆ ಹೋಗಿದ್ದೆ ಅಲ್ಲಿ ಅಡುಗೆ ಮಾಡಿಟ್ಟು, ಸಂಜೆ ವಾಪಸ್ ಬಂದೆ. ಅಷ್ಟರಲ್ಲಿ ಅಪ್ಪ-ಅಮ್ಮ ಸತ್ತು ಹೋಗಿದ್ದರು. ನಂತರ ನಾನು ಮೊದಲೇ ತೀರ್ಮಾನ ಮಾಡಿದ ಹಾಗೆ, ಮನೆ ಒಳಗಿನಿಂದ ಬೀಗ ಹಾಕಿ ಮಗಳು ಮೋನಿಕಾಳನ್ನು ಉಸಿರುಗಟ್ಟಿಸಿ ಕೊಂದೆ. ಇವಾಗ ನಾನು ಸಾಯುತ್ತೇನೆ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣ ಪಡೆದು ಅಪಘಾತವಾಗಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬದವರನ್ನು ಪತ್ತೆಹಚ್ಚಲು ಸುಧಾರಾಣಿ ಅವರು ಬಳಸುತ್ತಿದ್ದ ಮೊಬೈಲ್ ವಶಕ್ಕೆ ತೆಗದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.