ಉಚಿತ ಹಾಸ್ಟೇಲ್ ಪರಿಕಲ್ಪನೆ ನೀಡಿದ ಜಯದೇವಶ್ರೀ

 ದಾವಣಗೆರೆ:

      ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಉಚಿತವಾಗಿ ಶಿಕ್ಷಣವನ್ನು ನೀಡಿದ ಕೀರ್ತಿ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ವಿರಕ್ತಮಠದ ಚರಮೂರ್ತಿ ಶ್ರೀಬಸವಪ್ರಭು ಸ್ವಾಮೀಜಿ ಸ್ಮರಿಸಿದರು.

      ನಗರದ ಶಿವಯೋಗಾಶ್ರಮದಲ್ಲಿ ಶುಕ್ರವಾರ ಸಂಜೆ ಶ್ರೀ ಜಯದೇವ ಜಗದ್ಗುರುಗಳ 62ನೇ ಸ್ಮರಣೋತ್ಸವದ ಅಂಗವಾಗಿ ನಡೆದ ಶ್ರೀ ಜಯದೇವಲೀಲೆ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಡವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದನಿಲಯಗಳ ಪರಿಕಲ್ಪನೆ ಮೊದಲು ನೀಡಿ ಅದನ್ನು ಸ್ಥಾಪಿಸಿ, ಕೋಟ್ಯಾಂತರ ಜನರ ಬಾಳಿಕೆ ಬೆಳಕಾಗಿದ್ದಾರೆ ಎಂದರು.

      ಇಪ್ಪತ್ತನೇಯ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಪ್ರಸಾರ ಮತ್ತು ಅನುಷ್ಠಾನ ಮಾಡಿದ ಕೀರ್ತಿ ಶ್ರೀಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ. ಲಿಂಗಾಯತ ಧರ್ಮದ ಜೀವಾಳವಾದ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಿದ್ದಾರೆ ಎಂದರು.

      ಜಯದೇವ ಶ್ರೀಗಳು ಮುರುಘಾಮಠವನ್ನು ಸರ್ವಜನಾಂಗದ ಮಠವನ್ನಾಗಿ ಮಾಡಿದರು. ಕೇವಲ ಲಿಂಗಾಯತರಿಗೆ ಉಚಿತ ಹಾಸ್ಟೆಲ್‍ಗಳನ್ನು ಸ್ಥಾಪಿಸಲಿಲ್ಲ. ಹರಿಜನರಿಗೆ, ಮುಸ್ಲಿಂ ಸಮಾಜದವರಿಗೂ ಉಚಿತ ಹಾಸ್ಟೆಲ್‍ಗಳನ್ನು ಸ್ಥಾಪಿಸಿದರು. ಮೊದಲು ದಾವಣಗೆರೆಯಲ್ಲಿ ಸ್ಥಾಪಿಸಿ, ನಂತರ ಬೆಂಗಳೂರು, ತುಮಕೂರು, ಚಿತ್ರದುರ್ಗ, ತಿಪಟೂರು ಧಾರವಾಡ, ಕೊಲ್ಲಾಪುರ, ಹಾವೇರಿ, ಅರಸಿಕೆರೆ ಮುಂತಾದ ಸ್ಥಳಗಳಲ್ಲಿ ಸ್ಥಾಪಿಸಿದರು. ಈಗ ಅವುಗಳೆಲ್ಲ ಶತಮಾನೋತ್ಸವ ಆಚರಿಸಿಕೊಂಡು ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿವೆ ಎಂದರು.

      ವಿಶ್ವಗುರು ಬಸವಣ್ಣನವರ ತತ್ವಗಳಾದ ಕಾಯಕ, ದಾಸೋಹ, ಸಮಾನತೆಯನ್ನು ಚಾಚೂ ತಪ್ಪದೆ ಪಾಲಿಸಿ, ಜನರ ಬದುಕಿಗೆ ಬೆಳಕಾಗಿದ್ದಾರೆ. ಸತ್ಕಾರ್ಯಗಳ ಮೂಲಕ ಬದುಕಿಗೆ ಬೆಳಕು ಬರುತ್ತದೆ. ಸತ್ಕಾರ್ಯಗಳನ್ನು ಸಾಧಿಸಿ ಮಹಾತ್ಮರಾದವರು ಶ್ರೀ ಜಯದೇವ ಜಗದ್ಗುರುಗಳು ಎಂದರು.

      ಜಾತಿ ಎಂಬ ಕತ್ತಲ್ಲನ್ನು ಹೊಡೆದೊಡಿಸಿದವರು ಜಯದೇವ ಶ್ರೀಗಳು. ಹಡಪದ ಭಕ್ತರ ಮನೆಯಲ್ಲಿ ಪೂಜಾ ಪ್ರಸಾದ ಮಾಡಿ, ಅವರಿಗೆಲ್ಲರಿಗೂ ಲಿಂಗದೀಕ್ಷೆಯನ್ನು ನೀಡಿದರು. ಅಂದಿನ ಜಾತಿವಾದಿಗಳು ವಿರೋಧಿಸಿದಾಗ, ಶ್ರೀ ಜಯದೇವ ಜಗದ್ಗುರುಗಳು ಬಸವತತ್ವದಂತೆ ಎಲ್ಲರನ್ನು ಅಪ್ಪಿಕೊಳ್ಳುವ ಕಾರ್ಯ ಮಾಡಿದ್ದೇವೆ ಎಂದು ಉತ್ತರ ನೀಡಿದರು ಎಂದರು.

      ಕಾರ್ಯಕ್ರಮ ಉದ್ಘಾಟಿಸಿದ ಕೆಎಸ್‍ಎಸ್ ಫೌಂಡೇಷನ್ ಅಧ್ಯಕ್ಷ ಹೆಚ್.ಕೆ.ಬಸವರಾಜ್ ಮಾತನಾಡಿ, ದಾವಣಗೆರೆಯ ವಿರಕ್ತಮಠ, ಮುರುಘಾಮಠ ದೊಡ್ಡ ವಿಚಾರವನ್ನು ಹೊಂದಿರುವ ಮಠಗಳಾಗಿವೆ. ಬಸವಣ್ಣನವರ ಆಶಯದಂತೆ, ಸರ್ವರನ್ನು ಸಮಾನತೆಯಿಂದ ಜೊತೆಯಾಗಿ ಕರೆದುಕೊಂಡು ಇಲ್ಲಿ ಹೋಗಲಾಗುತ್ತಿದೆ ಎಂದು ಹೇಳಿದರು.

      ಪ್ರವಚನಕಾರ ಮಹಾಂತೇಶ ಶಾಸ್ತ್ರಿಗಳು ಮಾತನಾಡಿ, ಜಯದೇವ ಜಗದ್ಗುರುಗಳು ಸಮಾಜ ಕಲ್ಯಾಣಕ್ಕೆ ತಮ್ಮ ಮುಡಿಪಾಗಿಟ್ಟರು. ಜನರ ಉದ್ಧಾರಕ್ಕೆ ಹಗಲಿರುಳು ಶ್ರಮಿಸಿದರು ಎಂದರು.

      ಎನ್.ಆರ್.ಪುರಂ ಬಸವಕೇಂದ್ರದ ಶ್ರೀಶಿವಯೋಗ ಪ್ರಭು ಸ್ವಾಮೀಜಿ, ಬಸವ ಕಿರಣ ಸ್ವಾಮೀಜಿ, ಸಿರಸಂಗಿ ಮಠದ ಮಹಾಂತಸ್ವಾಮಿಗಳು, ಹಾಸಬಾವಿ ಕರಬಸಪ್ಪ, ವೀರೇಂದ್ರ, ಶರಣಬಸವ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಬಸವಕಲಾ ಲೋಕದ ತಂಡದಿಂದ ವಚನಗಾಯನ ನಡೆಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link