ಶ್ರೀನಗರ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಂಡಿಪೋರಾ ಜಿಲ್ಲೆಯ ಕುಲ್ನಾರ್ ಬಾಜಿಪುರ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಡಗಿದ್ದ ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು ಎಂದು ಅವರು ಹೇಳಿದರು. ಘಟನೆಯಲ್ಲಿ ಇದುವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ ಮೂರು ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಉಗ್ರರ ಶೋಧ ಕಾರ್ಯಾಚರಣೆ ಚುರುಕುಗೊಂಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ದಾಳಿಕೋರರನ್ನು ಬಂಧಿಸಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಗುಂಡಿನ ಚಕಮಕಿ ನಡೆದಿದೆ.ಒಬ್ಬೊಬ್ಬ ಉಗ್ರನನ್ನೂ ಹುಡುಕಿ ಹೊಡೆಯಲಿದ್ದೇವೆ, ಅವರಿಗೆ ತಕ್ಕ ಶಾಸ್ತಿ ಮಾಡಿಯೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದರು. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ನೆನೆದ ಪ್ರಧಾನಿ ಮೋದಿ, ನಿರೀಕ್ಷೆಯೇ ಮಾಡಿರದ ಸಾವು ಆ ಉಗ್ರರಿಗೆ ಬರಲಿದೆ ಎಂದು ಹೇಳಿದ್ದಾರೆ.
ಕೇವಲ ಜನರ ಮೇಲೆ ಮಾಡಿದ ದಾಳಿ ಅದಲ್ಲ ಆ ದಾಳಿ ಭಾರತ ಆತ್ಮದ ಮೇಲಾಗಿದೆ, ಯಾರು ಈ ದುಸ್ಸಾಹಸ ಮಾಡಿದ್ದಾರೋ, ಯಾರು ಈ ದಾಳಿಯ ಹಿಂದಿದ್ದಾರೋ, ಅವರಿ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.ಉಗ್ರರನ್ನು ಹೆಡೆಮುರಿ ಕಟ್ಟಿ ನಮ್ಮ ದೇಶದಿಂದ ಹೊರ ಹಾಕುವ ಸಮಯ ಬಂದಿದೆ. ಭಾರತೀಯರೆಲ್ಲರೂ ಒಗ್ಗಟ್ಟಿನಲ್ಲಿದ್ದರೆ ಉಗ್ರರ ಸೊಂಟ ಮುರುಯುವುದೇನೂ ಕಷ್ಟವಲ್ಲ. ಈ ಭೂಮಿಯಿಂದಲೇ ಅವರನ್ನು ಹೊರಗಟ್ಟುತ್ತೇವೆ. ಯಾರು ಮಾನವೀಯತೆ ನಂಬಿದ್ದಾರೋ ಅವರು ನಮ್ಮ ಜತೆಗಿದ್ದಾರೆ ಎಂದು ಹೇಳಿದ್ದರು.
