ತುರುವೇಕೆರೆ :
2020-2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಶಾಂತಿಯುತವಾಗಿ ನಡೆದು, ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷೆ ಬರೆದರು.
ಕೋವಿಡ್ನಿಂದ ಸಾಮಾಜಿಕ ಅಂತರ ಕಾಪಾಡಲು ಈ ಬಾರಿ 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಕೋವಿಡ್ ನಿಯಮದಂತೆ ಪರೀಕ್ಷಾ ಕೇಂದ್ರಗಳಿಗೆ ಮತ್ತು ಮಕ್ಕಳಿಗೆ ಸ್ಯಾನಿಟೈಸರ್ ಮಾಡಲಾಯಿತು. ಜೊತೆಗೆ ಥರ್ಮಲ್ ಸ್ಕ್ಯಾನ್ ಮಾಡಿ ಮಾಸ್ಕ್ ತರದ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು. ಒಂದು ಕೊಠಡಿಗೆ ಕೇವಲ 12 ಮಕ್ಕಳನ್ನು ಕೂರಿಸಲಾಗಿತ್ತು. ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಪರೀಕ್ಷೆ ಜರುಗಿತು.
ಈ ಬಾರಿ 1908 ಹಾಗು 75 ಪುನರಾವರ್ತಿತ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು ಅದರಲ್ಲಿ 12 ಮಕ್ಕಳು ಮಾತ್ರ ಗೈರು ಹಾಜರಾಗಿದ್ದರು. ಪರೀಕ್ಷಾ ಕಾರ್ಯಕ್ಕೆ ಒಟ್ಟು 355 ಸಿಬ್ಬಂದಿಗಳು ಹಾಗು ಪೊಲೀಸ್ರು ನಿಯೋಜನೆಗೊಂಡಿದ್ದರು. ಜ್ವರ, ಕೆಮ್ಮೆ ಇಂತಹ ಕಾಯಿಲೆಗಳಿರುವ ವಿದ್ಯಾರ್ಥಿಗಳು ಯಾವುದೇ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ಬರೆದದ್ದು ಕಂಡು ಬರಲಿಲ್ಲ.
ಶಾಸಕ ಮಸಾಲಜಯರಾಂ ಅವರು ಮಾಯಸಂದ್ರ ಮತ್ತು ಟಿ.ಬಿ.ಕ್ರಾಸ್ ಸಮೀಪದ ಪರೀಕ್ಷಾ ಕೇಂದಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ತಹಶೀಲ್ದಾರ್ ಆರ್.ನಯೀಂಉನ್ನೀಸಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಅವರು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
