ಹಗರಿಬೊಮ್ಮನಹಳ್ಳಿ
ನಮ್ಮ ಹಿರಿಯರ ಹೋರಾಟದ ತ್ಯಾಗಬಲಿದಾನಗಳಿಂದ ಇಂದು ಕಾರ್ಮಿಕರಿಗೆ ಸೌಲಭ್ಯಗಳು ದೊರೆಯುವಲ್ಲಿ ಯಶಸ್ವಿಯಾಗಿವೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷ ಭಾಸ್ಕರ ರೆಡ್ಡಿ ಹೇಳಿದರು.
ಪಟ್ಟಣದ ಈಶ್ವರ ದೇಗುಲದ ಬಳಿ ಇರುವ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಿಐಟಿಯು ತಾಲೂಕು ಘಟಕದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕರ 134ನೇ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ಅಣ್ಣನೆಂದೇ ಕರೆಸಿಕೊಳ್ಳುವ ಅಮೇರಿಕ ದೇಶದಲ್ಲಿ ಕಾರ್ಮಿಕರು ದಿನದ 12ಗಂಟೆಗೂ ಹೆಚ್ಚುಕಾಲ ದುಡಿಯುತ್ತಿರುವ ವರ್ಗವಿತ್ತು. ದುಡಿಮೆಗೆ ಪ್ರತಿಫಲವಿಲ್ಲದೆ ಕಾರ್ಮಿಕವರ್ಗ ವಿಲವಿಲ ಎನ್ನುತ್ತಿತ್ತು.
1886ರಲ್ಲಿ ಕಾರ್ಮಿಕರ ಸಂಘಟನೆಮಾಡಿಕೊಂಡು ಮಾಲೀಕರ ವಿರುದ್ಧ ಹೋರಾಟಕ್ಕೆ ಇಳಿದರು. ಆ ಸಮಯದಲ್ಲಿ ಅಲ್ಲಿನ ಆಡಳಿತ ಸರ್ಕಾರ ಮತ್ತು ಕಾರ್ಮಿಕರ ನಡುವೆ ಘರ್ಷಣೆಗಳು ನಡೆದವು. ಕೆಲವರನ್ನು ಕೊಲ್ಲಲಾಯಿತು, ಕೆಲವರಿಗೆ ಸುಳ್ಳು ಅಪಾದನೆಯ ಮೇರೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಇನ್ನೂ ಕೆಲವರು ಜೈಲು ಪಾಲಾದರು. ಜೈಲಿನಲ್ಲಿದ್ದವರಲ್ಲಿ ನಾಲ್ಕುಜನ ಬಿಡುಗಡೆಯಾಗಿ, ಮತ್ತೇ ಹೋರಾಟ ಕಿಚ್ಚು ಹೊತ್ತಿ ಉರಿಯಿತು.
25ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಭಾಗಿಗಳಾದರು. ಆಗಲೂ ಅಪಾರ ನಷ್ಟವಾಗಿ ಕಾರ್ಮಿಕರು ಬಲಿಯಾದರು. ಅದರಲ್ಲಿ ಒಬ್ಬ ಕಾರ್ಮಿಕ ಕೊನೆಉಸಿರು ಎಳೆಯುವಾಗ ತನ್ನ ತಕ್ತದ ಮಡುವಿನಲ್ಲಿ ಬಿದ್ದಕ್ಷಣದಲ್ಲಿ ತನ್ನ ಮೈಮೇಲೆ ಇದ್ದ ಅಂಗಿಯನ್ನು ಹರಿದು ರಕ್ತದಲ್ಲಿ ಅದ್ದಿ ಬಾವುಟದಂತೆ ಹಾರಿಸುತ್ತಾ, ಇದು ಮುಂದಿನ ಹೋರಾಟದ ಬಾವುಟದ ಸಂಕೇತವಾಗಿದೆ ಎಂದು ಕೂಗಿದರು.
ಇದರ ಪ್ರತಿಫಲವಾಗಿ 1889ರಲ್ಲಿ ಕಾನೂನು ಕಾರ್ಮಿಕರ ಬೇಡಿಕೆಗಳ ಪರವಾಗಿ ನಿಲುವು ತಾಳುವ ಜೊತೆಗೆ ಕಾರ್ಮಿಕರಿ ಸೌಲಭ್ಯಗಳನ್ನು ನೀಡಲು ಒಪ್ಪಿತು. ಅಂದಿನಿಂದ ಕಾರ್ಮಿಕ 8ಗಂಟೆ ಕೆಲಸ, 8ಗಂಟೆ ವಿಶ್ರಾಂತಿ ಇನ್ನು 8ಗಂಟೆ ಇತರೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾಯ್ದೆ ಜಾರಿಯಾಯಿತು. ಆಗ 1890ರ ಮೇ.1ರಂದು ವಿಶ್ವಕಾರ್ಮಿಕರ ದಿನಾಚರಣೆಯಾಗಿ ಜಾರಿಗೆ ಬಂದಿದ್ದು ಅಲ್ಲದೆ, ಕಾರ್ಮಿಕರಿಗೆ ಒಂದು ದಿನ ವೇತನ ಸಹಿತ ರಜೆ ಘೋಷಣೆಯಾಯಿತು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಿ.ಐ.ಟಿ.ಯು.ನ ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಿ.ಐ.ಟಿ.ಯು. ಸಂಘಟನೆಯೊಂದಿಗೆ ಕಾರ್ಮಿಕರು ಬದುಕಿನ ಭದ್ರತೆಯನ್ನು ಕಟ್ಟಿಕೊಂಡವರು. ಇನ್ನೂ ಹೋರಾಟ ಇಲ್ಲಿಗೆ ಮುಗಿಯಲಿಲ್ಲ. ಆದರೆ, ಯಾವುದೇ ಕಾರ್ಯಕ್ರಮಕ್ಕೆ ಕರೆದರೂ, ಸಮಯಕ್ಕೆ ಸರಿಯಾಗಿ ಆಗಮಿಸಿ ಸ್ಪಂದಿಸುವ ವರ್ತನೆ ನಿಮ್ಮಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಗ್ರಾ.ಪಂ.ನೌಕರರ ಸಂಘದ ಖಜಾಂಚಿಯಾದ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ, ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಯು.ಮಂಜುನಾಥ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಯು.ತೋಟೇಶ್, ಬಿಸಿಯೂಟ ತಯಾರಕರ ಸಂಘದ ಸಂಚಾಲಕಿ ಎಸ್.ಸುನಿತಾ, ಪ್ರಾಂತ ರೈತ ಸಂಘದ ಸಂಚಾಲಕ ಕೊಟಿಗಿ ಮಲ್ಲಿಕಾರ್ಜುನ ಮತ್ತಿತರರು ಇದ್ದರು.ಗ್ರಾ.ಪಂ.ಬಿಲ್ ಕಲೇಕ್ಟರ್ ಮಹೇಶ್ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
