ಬ್ಯಾಲ್ಯ ಗ್ರಾಪಂಯಲ್ಲಿ  25 ಲಕ್ಷ ರೂ.ಅವ್ಯವಹಾರದ ಆರೋಪ 

ತುಮಕೂರು:

ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಕೆಲ ಸದಸ್ಯರ ಒತ್ತಾಯ

   ಮಧುಗಿರಿ ತಾಲ್ಲೂಕು ಪುರವರ ಹೋಬಳಿ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 25 ಲಕ್ಷ ರೂ.ಗಳÀಷ್ಟು ಅವ್ಯವಹಾರ ನಡೆದಿದ್ದು, ಅದರಲ್ಲಿ ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಮುಖಂಡರುಗಳೇ ನೇರವಾಗಿ ಭಾಗಿಯಾಗಿ ರುವ ಬಗ್ಗೆ ಹಲವು ದಾಖಲೆಗಳಿವೆ. ಹಾಗಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಒತ್ತಾಯಿಸಿದ್ದಾರೆ.

ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲೆಂದು ಮತ್ತು ಹಳ್ಳಿಗಳು ಉದ್ದಾರವಾಗದೇ ದೇಶ ಉದ್ದಾರವಾಗದು ಎಂಬ ಪರಿಕಲ್ಪನೆಯಂತೆ ಸ್ಥಳೀಯ ಮಟ್ಟದಲ್ಲಿ ರಚನೆಯಾಗಿರುವ ಗ್ರಾಮ ಪಂಚಾಯಿತಿ ಆಡಳಿತಗಳು ಇಂದು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಕೆಲ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಹಲವು ಅನುದಾನಗಳು ಭ್ರಷ್ಟ ಅಧಿಕಾರಿಗಳ, ಪ್ರಭಾವಿಗಳ ಮತ್ತು ಗುತ್ತಿಗೆದಾರರ ಜೇಬು ಸೇರುತ್ತಿವೆ ಎಂಬ ಆರೋಪ ಇಲ್ಲಿನ ಸ್ಥಳೀಯರದ್ದಾಗಿದೆ.

ಸದರಿ ಗ್ರಾಮ ಪಂಚಾಯಿತಿ ಕಮಿಟಿ ಆಯ್ಕೆಯಾಗಿ 10 ತಿಂಗಳಾಗಿದ್ದರೂ, ಇಲ್ಲಿವರೆಗೆ 10 ಸಾಮಾನ್ಯ ಸಭೆಗಳನ್ನು ಕರೆಯ ಬೇಕಾಗಿತ್ತು. ಆದರೆ ಕೇವಲ 3 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಈ ಹಿಂದಿನ ಅವಧಿಯ ಬಿಲ್ ಗಳು ಬಾಕಿಯಿವೆ ಎಂದು ತೋರಿಸಿ ವಿವಿಧ ಏಜೆನ್ಸಿಗಳಿಗೆ ಸುಮಾರು 28 ಲಕ್ಷ ರೂ. ಡ್ರಾ ಮಾಡಿ ಕೊಟ್ಟಿರುತ್ತಾರೆ. ಈ ಎಲ್ಲ ಬಿಲ್‍ಗಳನ್ನು ಪಾವತಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿಲ್ಲ, ಹಾಗೆಯೇ ಹಿಂದಿನ ಪಿಡಿಓ ಹಳೆ ಬಿಲ್‍ಗಳು ಬಾಕಿಯಿವೆ ಎಂದು ಎಲ್ಲೂ ನಮೂದಿಸಿರುವುದಿಲ್ಲ. ಹಾಗಾಗಿ ಪಂಚಾಯಿತಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪವಿದೆ.

ಅಭಿವೃದ್ದಿ ಅಧಿಕಾರಿಗೆ 1 ದಿನದಲ್ಲಿ 20 ಸಾವಿರ ಮಾತ್ರ ಖರ್ಚು ಮಾಡಲು ಅಧಿಕಾರವಿದೆ. ಆದರೆ ಇಲ್ಲಿ ನಿಯಮ ಮೀರಿ ಹಲವು ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳಿಗೆ ಲಕ್ಷಾಂತರ ರೂ. ಸರ್ಕಾರಿ ಹಣವನ್ನು ಒಂದೇ ದಿನದಲ್ಲಿ ಪಾವತಿಸಿರುತ್ತಾರೆ. ಅನೇಕ ಬಿಲ್‍ಗಳು ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ಮತ್ತು ಕಾಮಗಾರಿ ನಡೆಯದಿದ್ದರೂ ಕೂಡ ಹಣ ಪಾವತಿಸಿರುತ್ತಾರೆ. ಈ ಎಲ್ಲ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದರಿ ಗ್ರಾಮ ಪಂಚಾಯಿತಿ ಸದಸ್ಯರು ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ಕೇಳಿದ್ದರೂ ಸದರಿ ಪಿಡಿಓ ರವರು ಇದುವರೆಗೂ ಮಾಹಿತಿ ನೀಡಿರುವುದಿಲ್ಲ. ಈ ದೂರುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕೆಲ ಪಂಚಾಯಿತಿ ಸದಸ್ಯರು ನವೆಂಬರ್ 4 2021 ರಂದು ಪಿಡಿಓ ಮುದ್ದುರಾಜು ಅವರನ್ನು ದಾಖಲೆಗಳನ್ನು ಕೇಳುತ್ತಿದ್ದಾಗ ಅಧ್ಯಕ್ಷೆ ಗಂಗರತ್ನಮ್ಮ ಅವರ ಪತಿ ಎಸ್.ಎಲ್. ಬೈರಪ್ಪ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮಹಿಳಾ ಸದಸ್ಯರನ್ನು ಒಳಗೊಂಡಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅಧ್ಯಕ್ಷರ ಅನುಮತಿಯಿಲ್ಲದೆ ಯಾರಿಗೂ ಮಾಹಿತಿ ನೀಡಬಾರದೆಂದು ಪಿಡಿಓ ಅವರಿಗೆ ತಾಕೀತು ಮಾಡಿರುತ್ತಾರೆ.

ಸದರಿ ಗ್ರಾಮ ಪಂಚಾಯಿತಿಯಲ್ಲಿ ನೌಕರರ ಹಾಜರಾತಿಗಾಗಿ ಇರಬೇಕಾದ ಬಯೋ ಮೆಟ್ರಿಕ್ ವ್ಯವಸ್ಥೆ ಇರುವುದಿಲ್ಲ, ಸಿಸಿ ಕ್ಯಾಮರಾ ಅಳವಡಿಸಿರುವುದಿಲ್ಲ. ನೌಕರರ ಮೂವ್‍ಮೆಂಟ್ ಡೈರಿ ವ್ಯವಸ್ಥೆ ಇರುವುದಿಲ್ಲ. ಪಿಡಿಓ ಕೇಂದ್ರ ಸ್ಥಾನದಲ್ಲಿರದೇ ಸಮಯಕ್ಕೆ ಸರಿಯಾಗಿ ಹಾಜರಾಗದೆ, ಅನುದಾನದ ಹಣವನ್ನು ಸಮಯಕ್ಕೆ ಸರಿಯಾಗಿ ಡ್ರಾ ಮಾಡುತ್ತಿಲ್ಲ. ಇವರು ಕೆಲಸಕ್ಕೆ ಹಾಜರಾಗುವುದು ಮಧ್ಯಾಹ್ನ 12 ಗಂಟೆಗೆ, ಅಲ್ಲಿಯವರೆಗೂ ಇಲ್ಲಿ ಬಿಲ್ ಕಲೆಕ್ಟರ್ ಟಿ. ನಾಗರಾಜು ವ್ಯಕ್ತಿಯದೇ ಕಾರುಬಾರು. ಈತ ಈ ಹಿಂದೆಯೇ ಅಣ್ಣನ ನಿವೇಶನಕ್ಕೆ ತಾಯಿಯ ಹೆಸರಿಗೆ ಆಶ್ರಯ ಮನೆ ಹಾಕಿಸಿಕೊಂಡು ಪತ್ನಿಯನ್ನು ನಿಲ್ಲಿಸಿಕೊಂಡು ಪೋಟೋ ತೆಗೆಸಿಕೊಂಡು ಸುಮಾರು ಒಂದೂವರೆ ಲಕ್ಷ ಡ್ರಾ ಮಾಡಿಕೊಂಡು ನುಂಗಿರುವ ಬಗ್ಗೆ ದಾಖಲೆ ಸಮೇತ ಸಿಕ್ಕಿದ್ದರೂ ಸೂಕ್ತ ತನಿಖೆ ನಡೆಸದೆ ಕರ್ತವ್ಯದಲ್ಲಿ ಮುಂದುವರಿಸಿರುತ್ತಾರೆ.

ಈತನಿಗೆ 3-8-2021 ರಂದು ಒಂದು ಲಕ್ಷ ಹನ್ನೆರಡು ಸಾವಿರದ ಒಂಬೈನೂರ ಇಪ್ಪತ್ತು ರೂ.ಗಳನ್ನು ಪಂಚಾಯಿತಿಯಿಂದ ಬಿಡುಗಡೆ ಮಾಡಲಾಗಿದೆ. ಸದರಿ ಪಂಚಾಯಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ಈ- ಸ್ವತ್ತಿಗೆ ಸುಮಾರು 15 ರಿಂದ 25 ಸಾವಿರದವರೆಗೆ ಲಂಚ ಕೇಳುತ್ತಾರೆ. ಎನ್.ಆರ್.ಜಿ. ಕೆಲಸಗಳಂತು ಲಂಚ್ ಕೊಡದೆ ಬಿಲ್ ಆಗುವುದಿಲ್ಲ. ಮೇಲಧಿಕಾರಿಗಳು ಈ ಅಂಶಗಳ ಬಗ್ಗೆ ಗಮನ ಹರಿಸಿ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಬ್ಯಾಲ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್, ಯೋಗೀಶ್, ಬಿ.ಎಸ್. ಶಾರದಮ್ಮ ಮತ್ತು ಎಂ.ಎನ್. ರಾಧಮ್ಮ ಇವರುಗಳು ಒತ್ತಾಯಿಸುವುದರ ಜೊತೆಗೆ ತನಿಖೆಗೆ ಬೇಕಾದ ಸೂಕ್ತ ದಾಖಲೆಗಳನ್ನು ನೀಡುವುದಾಗಿ ತಿಳಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link