ಬರಗೂರು :
ಮನುಷ್ಯನಿಗೆ ಶುದ್ದ ಕುಡಿಯುವ ನೀರು ಅತಿ ಮುಖ್ಯವಾದ ಅಂಶ. ಇದನ್ನು ಮನಗಂಡು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ನಮ್ಮ ತಾಲ್ಲೂಕಿನ ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್ನ್ನು ನೀಡುತ್ತಿದ್ದೇನೆ ಎಂದು ವಿಕ್ಟೋರಿಯ ಆಸ್ಪತ್ರೆಯ ಡಾ.ಸಿಎಂ ರಾಜೇಶ್ ಗೌಡ ತಿಳಿಸಿದರು.
ಅವರು ಶುಕ್ರವಾರ ಸಿರಾ ತಾಲ್ಲೂಕು ಬರಗೂರು ಗ್ರಾಮದ ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಗೆ ವಾಟರ್ ಫಿಲ್ಟರ್ ನೀಡಿ ಮಾತನಾಡಿದರು.
ಸುರಕ್ಷಿತ ಕುಡಿಯುವ ನೀರಿನಿಂದ ಮಕ್ಕಳು ಇಂದು ವಂಚಿತರಾಗಿದ್ದಾರೆ. ಅಶುದ್ದ ಕುಡಿಯವ ನೀರಿನಿಂದ ಹಲವು ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಸಹ ಸಾಕಷ್ಟು ಕಡೆ ಗಳಲ್ಲಿ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ನಾನು ಸಹ ನನ್ನ ಭಾಗದ ಶಾಲಾ ಮಕ್ಕಳಿಗೆ ಶುದ್ದ ನೀರಿನ ಘಟಕವನ್ನು ಕಲ್ಪಿಸಲು ಸಣ್ಣ ಪ್ರಯತ್ನ ಮಾಡಿದ್ದೇನೆ. ಇದು ಪ್ರಚಾರಕ್ಕಾಗಿ ಅಲ್ಲ. ನಾನೊಬ್ಬ ವೈದ್ಯನಾಗಿ ನನ್ನ ಮನಃ ತೃಪ್ತಿಗಾಗಿ ಎಂದರು.
ಆಂಜನೇಯ ಸ್ವಾಮಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಹಾಲಗುಂಡೆಗೌಡ ಮಾತನಾಡಿ, ನಮ್ಮ ಸಿರಾ ತಾಲ್ಲೂಕಿನ ಗೌಡಗೆರೆ, ಹುಲಿಕುಂಟೆ ಹೋಬಳಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಪಾತಾಳಕ್ಕೆ ಕುಸಿದು, ಫ್ಲೋರೈಡ್ನ ಅಶುದ್ದ ನೀರನ್ನು ಕುಡಿದು ನಾವು ಸಾಕಷ್ಟು ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಶಾಲೆಗಳಿಗೆ ಫಿಲ್ಟರ್ ನೀಡಲು ಡಾ.ರಾಜೇಶ್ ಗೌಡರು ಮುಂದೆ ಬಂದಿರುವುದು ನಮಗೆ ಸಂತೋಷ ತಂದಿದೆ. ಅಂತೆಯೇ ಇಲ್ಲಿನ ಸರ್ಕಾರಿ ಶಾಲೆಗೂ ಕಲ್ಪ್ಪಿಸಲಿದ್ದಾರೆ ಎಂದರು.
ಸಮಾಜ ಸೇವಕ ತಾವರೆಕೆರೆ ದೇವರಾಜು, ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಗೌಡ, ಖಜಾಂಚಿ ಪಾಂಡುರಂಗಪ್ಪ, ದೇವರಾಜು, ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಕರವೇ ಅಧ್ಯಕ್ಷ ಲತೀಫ್, ಭೂತರಾಜು ಸತೀಶ್, ಪತ್ರಕರ್ತ ವಲಿಸಾಬ್ಬರಗೂರು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
