ಚಿತ್ರದುರ್ಗ:
ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿರವರ ಮೇಲೆ ಲಂಚದ ಆಪಾದನೆ ಹೊರಿಸುತ್ತಿರುವುದರ ಹಿಂದೆ ಷಡ್ಯಂತ್ರವಿದೆ ಎಂದು ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಟೀಕಾಕಾರಿಗೆ ತಿರುಗೇಟು ನೀಡಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದುಳಿದ ಉಪ್ಪಾರ ಸಮಾಜಕ್ಕೆ ಸೇರಿದ ಪುಟ್ಟರಂಗಶೆಟ್ಟಿರವರಿಗೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ವಿಧಾನಸೌಧದ ಮುಂಭಾಗ ಸಚಿವರ ಆಪ್ತ ಮೋಹನ್ ಬಳಿ ಸಿಕ್ಕಿರುವ 25 ಲಕ್ಷ ರೂ.ಗಳಿಗೂ ಸಚಿವ ಪುಟ್ಟರಂಗಶೆಟ್ಟಿರವರಿಗೂ ಯಾವುದೇ ಸಂಬಂಧವಿಲ್ಲ. ಹಣ ಸಿಕ್ಕ ದಿನದಂದು ಪುಟ್ಟರಂಗಶೆಟ್ಟಿರವರು ಚಾಮರಾಜನಗರದಲ್ಲಿದ್ದರು. ವಿಧಾನಸೌಧದಲ್ಲಿರಲಿಲ್ಲ ಇದೇ ರೀತಿ ಪರಿಸ್ಥಿತಿ ಮುಂದುವರೆಸಿದ್ದೇ ಆದಲ್ಲಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ವಿರೋಧಿಗಳ ಆಪಾದನೆಗೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪ್ಪಾರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ ಮೂರು ಬಾರಿ ಶಾಸಕರಾಗಿ ಈಗ ಪುಟ್ಟರಂಗಶೆಟ್ಟಿರವರು ಉಪ್ಪಾರ ಸಮಾಜದಿಂದ ಸಚಿವರಾಗಿರುವುದು ಇದೇ ಮೊದಲು. ಸಚಿವರು ಅಂದು ವಿಧಾನಸೌಧದ ಕಚೇರಿಯಲ್ಲಿ ಇರದಿದ್ದರು ಕೆಲವರ ಕುತಂತ್ರದಿಂದ ಈ ಅವಘಢ ಸಂಭವಿಸಿದೆ. ಇನ್ನು ಮುಂದೆಯೂ ಸಚಿವರ ತೇಜೋವಧೆಯಾದರೆ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ಉಪ್ಪಾರ ಸಮಾಜದಿಂದ ಹೋರಾಟ ನಡೆಸಲಾಗುವುದು ಎಂದು ಬೆದರಿಕೆ ಹಾಕಿದರು.
ನಿವೃತ್ತ ಡಿ.ವೈ.ಎಸ್ಪಿ. ಎಸ್.ನಾಗರಾಜ್ ಮಾತನಾಡುತ್ತ ಉಪ್ಪಾರ ಸಮುದಾಯದಲ್ಲಿ ಪುಟ್ಟರಂಗಶೆಟ್ಟಿಯೊಬ್ಬರೆ ಮಂತ್ರಿಯಾಗಿರುವುದು ಕೆಲವರಿಗೆ ಸಂಕಟವಾಗಿದೆ. ಮೋಹನ್ ಬಳಿ ಸಿಕ್ಕಿರುವ ಹಣಕ್ಕೂ ಸಚಿವ ಪುಟ್ಟರಂಗಶೆಟ್ಟಿರವರಿಗೂ ಸಂಬಂಧವೇ ಇಲ್ಲ. ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಪುಟ್ಟರಂಗಶೆಟ್ಟಿರವರ ಹೆಸರಿಗೆ ಕಳಂಕ ಹಚ್ಚಲು ಕೆಲವು ಕಿಡಿಗೇಡಿಗಳು ಈ ರೀತಿಯ ಉಪಟಳ ನೀಡುತ್ತಿದ್ದಾರೆ. ಈಗಾಗಲೇ ಎ.ಸಿ.ಬಿ.ಯಿಂದ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಏನೆಂಬುದು ಹೊರಬಂದೆ ಬರುತ್ತದೆ. ವಿರೋಧಿಗಳ ಒತ್ತಡಕ್ಕೆ ಮಣಿದು ಮೈತ್ರಿ ಸರ್ಕಾರ ಪುಟ್ಟರಂಗಶೆಟ್ಟಿರವರನ್ನು ಸಚಿವ ಸಂಪುಟದಿಂದ ಕೈಬಿಟ್ಟರೆ ಉಪ್ಪಾರ ಸಮಾಜದ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟರಾಜ್ ಮಾತನಾಡುತ್ತ ವಿಧಾನಸೌಧದ ಆವರಣದಲ್ಲಿ ಹಣ ಸಿಕ್ಕಾಗ ಸಚಿವರು ವಿಧಾನಸೌಧದಲ್ಲಿ ಇರಲಿಲ್ಲ. ಒಂದು ವೇಳೆ ಗುತ್ತಿಗೆದಾರರು ಹಣ ನೀಡುವುದಾಗಿದ್ದರೆ ಚಾಮರಾಜನಗರದಲ್ಲಿದ್ದ ಸಚಿವರ ಬಳಿಗೆ ಹೋಗಿ ಕೊಡುತ್ತಿದ್ದರು. ಇದೊಂದು ಪೂರ್ವಯೋಜಿತ ಷಡ್ಯಂತ್ರ. ಯಾವುದೇ ಕಾರಣಕ್ಕೂ ಸಚಿವ ಸಂಪುಟದಿಂದ ಪುಟ್ಟರಂಗಶೆಟ್ಟಿರವರನ್ನು ಕೈಬಿಡಬಾರದು. ಒಂದು ವೇಳೆ ಬಿಟ್ಟಿದ್ದೇ ಆದಲ್ಲಿ ಗುರುಗಳ ಸಮ್ಮುಖದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದರು.ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಮಹೇಶ್, ಅಜ್ಜಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








