ಶ್ರೀ ಆಂಜನೇಯ ಸ್ವಾಮಿ ಬೃಹ್ಮ ರಥೋತ್ಸವ

ಹೊನ್ನಾಳಿ:

        ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬೃಹ್ಮ ರಥೋತ್ಸವ ಶನಿವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

        ಶ್ರೀ ಆಂಜನೇಯ ಸ್ವಾಮಿಯ ಕೋರೂಟದ ಬಳಿಕ 29ರ ಶುಕ್ರವಾರ ಮಧ್ಯರಾತ್ರಿಯಿಂದ 30ರ ಶನಿವಾರ ಮುಂಜಾನೆಯವರೆಗೆ ಗಜೋತ್ಸವ ವಿಜೃಂಭಣೆಯಿಂದ ಜರುಗಿತು. ಬಳಿಕ ಮಧ್ಯಾಹ್ನ 12ಕ್ಕೆ ಮಿಥುನ ಲಗ್ನದಲ್ಲಿ ವೈಭವದ ರಥೋತ್ಸವ, ಡೊಳ್ಳು, ಭಜನೆ, ತಮಟೆ, ಕಹಳೆ, ಜಾಗಟೆ, ಚಕ್ರವಾದ್ಯ, ಸಮಾಳ ಮೇಳಗಳ ಅದ್ದೂರಿ ಮಂಗಳಕರ ನಿನಾದದ ಮಧ್ಯೆ ಸನಾತನ ಪದ್ಧತಿಯಂತೆ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥಾರೋಹಣ ಹಾಗೂ ಉತ್ಸವಗಳು ವೈಭವದಿಂದ ನಡೆದವು.

         ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ, ಕಾಣಿಕೆ ಸಮರ್ಪಿಸಿದರು.

        31ರಂದು ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 6.30ರವರೆಗೆ ಶ್ರೀ ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ಹಾಗೂ ಕಾರ್ಣಿಕ ನಡೆಯಲಿದೆ. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡಂತೆ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಆರಂಭದಲ್ಲಿ ದಾಸಪ್ಪನವರು ಮುಳ್ಳುಗದ್ದುಗೆ ಏರುವ ಮೂಲಕ ವಿದ್ಯುಕ್ತವಾಗಿ ಈ ಕಾರ್ಯಕ್ರಮ ಪ್ರಾರಂಭವಾಗುತ್ತದೆ .

       ಬಡವ-ಬಲ್ಲಿದ, ಜಾತಿ-ಮತ ಭೇದವಿಲ್ಲದೆ ಹರಕೆ ಹೊತ್ತ ಸಮಸ್ತ ಭಕ್ತಾದಿಗಳು ಸಾಮೂಹಿಕವಾಗಿ ಗದ್ದುಗೆ ಏರಿ ಮುಳ್ಳು ತುಳಿಯುವ ದೃಶ್ಯ ಭಯಾನಕವಾಗಿದ್ದರೂ ಭಕ್ತಿಯ ಪರಾಕಾಷ್ಟೆಯಿಂದ ಇವೆಲ್ಲವೂ ಗೌಣವಾಗುತ್ತವೆ. ನಂತರ ಧಾರ್ಮಿಕ ವಿಧಿ-ವಿಧಾನದಿಂದ ದೇವರ ಪಲ್ಲಕ್ಕಿ ಏರಿದ ನಂತರ ಕಾರ್ಣಿಕ ನುಡಿಯುವ ದಾಸಪ್ಪನವರ ದೇವವಾಣಿ ಮೊಳಗುತ್ತದೆ.

        ಏ.1ರಂದು ಬೆಳಿಗ್ಗೆ 10.30ಕ್ಕೆ ಓಕುಳಿ ಮಹೋತ್ಸವ, ರಾತ್ರಿ 8ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದ್ದು, ಎಲ್ಲರೂ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.
ಜವುಳ, ಬಾಯಿ ಬೀಗ, ಮುದ್ರಾಧಾರಣೆ ಮುಂತಾದ ಭಕ್ತರ ಹರಕೆ-ಸೇವೆಗಳು ನಡೆಯುತ್ತವೆ. 1 ಮತ್ತು 2ರಂದು ಬಯಲು ಜಂಗೀ ಕುಸ್ತಿ ಪಂದ್ಯ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳ ಕುಸ್ತಿ ಪೈಲ್ವಾನರು ಭಾಗವಹಿಸುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles