ಹುಳಿಯಾರು:
ಹುಳಿಯಾರು ಬಸ್ ನಿಲ್ದಾಣದಲ್ಲಿ ತೆರವು ಮಾಡಿರುವ ಗೂಡಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಪಪಂ ಕಛೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಎಚ್ಚರಿಕೆ ನೀಡಿದರು.ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ತೆರವು ಕಾರ್ಯಚರಣೆ ಸಂದರ್ಭದಲ್ಲಿ ಫುಟ್ ಪಾತ್ ವ್ಯಾಪಾರಿಗಳು ಹಾಗೂ ರೈತ ಸಂಘದ ಸದಸ್ಯರೊಂದಿಗೆ ಪಪಂ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿದ ಅವರು ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳ ತೆರವು ಕಾರ್ಯಚರಣೆ ಸ್ವಾಗತಾರ್ಹ.
ಆದರೆ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದರು.ಇಲ್ಲಿ ವ್ಯಾಪಾರ ಮಾಡುತ್ತಿರುವವರಲ್ಲಿ ಎಷ್ಟೋ ಮಂದಿ ಕಡು ಬಡವರಾಗಿದ್ದುದೀ ವ್ಯಾಪಾರ ನೆಚ್ಚಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಈ ವ್ಯಾಪಾರ ನಂಬಿಯೇ ಸಾಲಸೂಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಮಕ್ಕಳಿಗೆ ಮಧುವೆ ಮಾಡಿದ್ದಾರೆ. ಈಗ ಇವರೆಲ್ಲರೂ ಬೀದಿಗೆ ಬಿಂದಿದ್ದು ಇವರ ಕೈ ಹಿಡಿಯುವುದು ಪಪಂ ಕರ್ತವ್ಯವಾಗಿದೆ. ಹಾಗಾಗಿ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದರು.
ಹುಳಿಯಾರಿನ ಅನೇಕ ಕಡೆ ಒತ್ತುವರಿ ಮಾಡಿದ್ದು ಕೇವಲ ಬಸ್ ನಿಲ್ದಾಣದಲ್ಲಿ ಮಾತ್ರ ತೆರವು ಮಾಡಿರುವುದು ಸರಿಯಲ್ಲ. ರಾಜ್ ಕುಮಾರ್ ರಸ್ತೆ, ರಂಗನಾಥಸ್ವಾಮಿ ದೇವಸ್ಥಾನದ ಸುತ್ತಾಮುತ್ತ, ಪೇಟೆಬೀದಿ, ರಾಮಗೋಪಾಲ್ ಸರ್ಕಲ್ ಹೀಗೆ ಎಲ್ಲ ಕಡೆಯೂ ಅನಧಿಕೃತ ಅಂಗಡಿಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕು ಕಾರ್ಯಧ್ಯಕ್ಷ ಕರಿಯಪ್ಪ, ಹೋಬಳಿ ಅಧ್ಯಕ್ಷ ಎಸ್.ಸಿ.ಬಿರಲಿಂಗಯ್ಯ, ಕಸಬ ಅಧ್ಯಕ್ಷ ಕೆಂಪಲಿಂಗಯ್ಯ, ಹೂವಿನ ತಿಪ್ಪೇಸ್ವಾಮಿ, ನೀರಾಈರಣ್ಣ, ಸೋಮಜ್ಜನಪಾಳ್ಯದ ಪುಟ್ಟಯ್ಯ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/10HULIYAR3.gif)