
ಮೈಸೂರಿನಲ್ಲಿರುವ ಶಕ್ತಿಧಾಮ ಅನಾಥ ಹೆಣ್ಣು ಮಕ್ಕಳಿಗೆ ಆಶ್ರಯ ಆಗಿರುವ ಕುಟೀರ. ಇಲ್ಲಿ ಅನಾಥ ಹೆಣ್ಣು ಮಕ್ಕಳು, ನಾನಾ ಕಷ್ಟಗಳಿಂದಾಗಿ ಕುಟುಂಬದಿಂದ ದೂರವಾದವರು ಹೀಗೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಈ ಶಕ್ತಿಧಾಮ ಆಶ್ರಯ ಆಗಿದೆ. ಇದರ ಬಗ್ಗೆ ಹೆಚ್ಚಾಗಿ ಗೊತ್ತಾಗಿದ್ದು ಅಪ್ಪು ಕಾಲವಾದ ಮೇಲೆ ಅವರ ಸಾಧನೆಗಳನ್ನು ಮೆಲುಕು ಹಾಕುವ ಸಂದರ್ಭದಲ್ಲಿ.
ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ಅವರ ಬಳಿಕ, ಗೀತಾ ಶಿವರಾಜ್ಕುಮಾರ್ ಶಕ್ತಿಧಾಮದ ಜವಾಬ್ದಾರಿ ವರಿಸಿಕೊಂಡಿದ್ದರು. ಆದರೆ ಶಕ್ತಿಧಾಮಕ್ಕೆ ಶಕ್ತಿ ಆಗಿ ನಿಂತಿದ್ದು, ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಈಗ ಅಪ್ಪು ಬಳಿಕ ಶಕ್ತಿಧಾಮಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ನಟ ಶಿವರಾಜ್ಕುಮಾರ್.
ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಖೊ ಖೋ ಆಟ!
ನಟ ಶಿವರಾಜ್ಕುಮಾರ್ ಶಕ್ತಿಧಾಮಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ ಶಿವಣ್ಣ ಮಕ್ಕಳೊಂದಿಗೆ ಉತ್ತಮ ಸಮಯ ಕಳೆದಿದ್ದಾರೆ. ಅಷ್ಟೆ ಅಲ್ಲ ಶಿವರಾಜ್ ಕುಮಾರ್ ಮಕ್ಕಳೊಂದಿಗೆ, ಪುಟ್ಟ ಪೋರನಂತೆ ಬೆರೆತು ಆಟ ಆಡಿದ್ದಾರೆ.
ಶಕ್ತಿಧಾಮದ ಹೆಣ್ಣು ಮಕ್ಕಳೊಂದಿಗೆ ಶಿವರಾಜ್ಕುಮಾರ್ ಖೊ ಖೋ ಆಟ ಆಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಿವಣ್ಣನ ಮಗುವಿನಂತಹ ಮನಸಿಗೆ ಎಲ್ಲರೂ ಬೋಲ್ಡ್ ಆಗಿದ್ದಾರೆ.
ಶಕ್ತಿಧಾಮದಲ್ಲಿ ಅಪ್ಪು ಸ್ಥಾನ ತುಂಬಿದ ಶಿವಣ್ಣ!
ಶಕ್ತಿಧಾಮದಲ್ಲಿ ಅಪ್ಪು ಮಾಡುತ್ತಿದ್ದ ಉತ್ತಮ ಕಾರ್ಯಗಳ ಬಗ್ಗೆ ನಟ ಶಿವರಾಜ್ಕುಮಾರ್ ಅವರಿಗೇ ಅಷ್ಟಾಗಿ ಗೊತ್ತಿರಲಿಲ್ಲ. ಅಪ್ಪು ದಿವಂಗತ ಆದ ಬಳಿಕ ಈ ಬಗ್ಗೆ ನಟ ಶಿವ ರಾಜ್ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ‘ಅವನು ಮಾಡುತ್ತಿದ್ದ ಎಷ್ಟೊ ಈ ಉತ್ತಮ ಕೆಲಸಗಳ ಬಗ್ಗೆ ತಮಗೆ ಗೊತ್ತಿರಲಿಲ್ಲ’ ಎನ್ನುವುದನ್ನು ಹೇಳಿಕೊಂಡಿದ್ದಾರೆ ಶಿವರಾಜ್ಕುಮಾರ್. ಅಪ್ಪು ಬಳಿಕ ಶಕ್ತಿಧಾಮವನ್ನು ದೊಡ್ಡಮನೆ ಮತ್ತಷ್ಟು ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಾ ಇದೆ. ಶಕ್ತಿಧಾಮದಲ್ಲಿ ಅಪ್ಪು ಸ್ಥಾನ ತುಂಬುತ್ತಿದ್ದಾರೆ ನಟ ಶಿವರಾಜ್ಕುಮಾರ್. ಅವರು ಮಕ್ಕಳೊಂದಿಗೆ ಬೆರೆಯುವ ಪರಿಯನ್ನು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ ಕುಟುಂಬಕ್ಕೂ ಶಕ್ತಿಧಾಮಕ್ಕೂ ಅವಿನಾಭಾವ ಸಂಬಂಧ!
ಶಿಕ್ಷಣದಿಂದ ವಂಚಿತರಾದ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿತ್ತು. ಅಂದಿನಿಂದಲೂ ಇಡೀ ರಾಜ್ ಕುಟುಂಬ ಶಕ್ತಿಧಾಮದ ಬಗ್ಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಬಂದಿದ್ದಾರೆ. ಪಾರ್ವತಮ್ಮ ನಿಧನದ ನಂತರ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮದ ಜವಾಬ್ದಾರಿ ಹೊತ್ತಿದ್ರು. ಇನ್ನು ಶಕ್ತಿಧಾಮಕ್ಕೆ ಪುನೀತ್ ರಾಜ್ ಕುಮಾರ್ ಕೂಡ ಹಲವು ಬಾರಿ ಭೇಟಿ ಕೊಟ್ಟಿದ್ದು, ತಮ್ಮದೇ ಆದ ರೀತಿಯಲ್ಲಿ ಶಕ್ತಿಧಾಮಕ್ಕೆ ಶಕ್ತಿ ತುಂಬುತ್ತಾ ಇದ್ದರು.
ಪಾರ್ವತಮ್ಮ ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಪುನೀತ್!
ಮೈಸೂರಿಗೆ ಪುನೀತ್ ರಾಜ್ ಕುಮಾರ್ ಬಂದಾಗಲೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡುತ್ತಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶಕ್ತಿಧಾಮದ ಮಕ್ಕಳಿಗೆ ಸಿಹಿ ಹಂಚುತ್ತಿದ್ದರಂತೆ ಪುನೀತ್ ರಾಜ್ಕುಮಾರ್. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳನ್ನು ಪುನೀತ್ ಕೊಡಿಸುತ್ತಿದ್ದರಂತೆ. ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಮೈಸೂರಿನ ಶಕ್ತಿಧಾಮದ ಹಿತ ಕಾಯುವ ಕಾರ್ಯವನ್ನು ರಾಜ್ ಕುಟುಂಬ ಮಾಡುತ್ತಾ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
