ನವದೆಹಲಿ:
ಗೋಧಿ ಹಾಗೂ ಹಿಟ್ಟಿನ ಬೆಲೆ ಏರಿಕೆಯನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.
ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮಾರ್ಗವಾಗಿ ಗೋಧಿ ಪೂರೈಕೆ ಕಡಿಮೆಯಾಗಿತ್ತು. ಇದರ ಬೆನ್ನಲ್ಲೇ ಜಾಗತಿಕ ಖರೀದಿದಾರರು ಭಾರತದತ್ತ ಮುಖಮಾಡಿದ್ದಾರೆ. ಬೇರೆ ದೇಶಗಳಿಗೆ ಗೋಧಿ ರಫ್ತು ಮಾಡಬೇಕಿದ್ದರೆ ಸರ್ಕಾರದ ಅನುಮತಿ ಪಡೆಯಬೇಕು.
ಬೇರೆ ದೇಶಗಳ ವಿನಂತಿಗೆ ತಕ್ಕಂತೆ ಗೋಧಿ ರಫ್ತು ಮಾಡಲಾಗುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆಯಲ್ಲಿ ತಿಳಿಸಿದೆ.
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾಗಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ವಿಶ್ವದಾದ್ಯಂತ ಗೋಧಿ ರಫ್ತಿನಲ್ಲಿ ಏರುಪೇರು ಉಂಟಾಗಿದೆ. ಇದನ್ನೇ ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಂಡು ವಿಶ್ವದಾದ್ಯಂತ ಗೋಧಿ ರಫ್ತಿನಲ್ಲಿ ಭಾರತ ಪ್ರಾಬಲ್ಯ ಸಾಧಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಗೋಧಿ ಕೊರತೆಯ ಲಾಭವನ್ನು ಪಡೆಯಲು ಭಾರತ ಮುಂದಾಗಿದೆ. ಹೀಗಾಗಿ, 2022-23ರ ಆರ್ಥಿಕ ವರ್ಷದಲ್ಲಿ 10 ಮಿಲಿಯನ್ ಟನ್ ಗೋಧಿ ರಫ್ತು ಮಾಡಲು ಭಾರತ ಯೋಜನೆ ಹಾಕಿಕೊಂಡಿದೆ. ಆದರೆ, ಸದ್ಯಕ್ಕೆ ರಫ್ತನ್ನು ನಿಲ್ಲಿಸಿ ದೇಶದಲ್ಲಿ ಗೋಧಿ ಬೆಲೆಯ ಸಮತೋಲನ ಕಾಪಾಡಿಕೊಳ್ಳುವ ಯೋಚನೆ ಮಾಡಿದೆ.
ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್, ಈರುಳ್ಳಿ ಬೀಜಗಳ ರಫ್ತು ಮೇಲಿರುವ ಷರತ್ತುಗಳನ್ನು ಸಡಿಲಿಸುವುದಾಗಿ ಹೇಳಿದೆ. ಈ ಹಿಂದೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು. ಈಗ ಮತ್ತೊಂದು ಅಧಿಸೂಚನೆಯಲ್ಲಿ ನಿಯಮಗಳ ಅನುಸಾರ ಈರುಳ್ಳಿ ಬೀಜಗಳನ್ನು ರಫ್ತು ಮಾಡಬಹುದಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/05/Wheat_Lead-2.gif)